ಆಗಸ್ಟ್ 5 ರಂದು ಶಾಸಕ ಎನ್. ಮಹೇಶ್ ಬಿಜೆಪಿಗೆ ಅಧಿಕೃತ ಸೇರ್ಪಡೆ!
ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್ ಮಹೇಶ್ ಅವರು ಆಗಸ್ಟ್ 05 ರಂದು ಬಿಜೆಪಿಗೆ ಸೇರಲಿದ್ದಾರೆ. ತಾವು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರುತ್ತೇನೆ ಎಂದು ಸ್ವತಃ ಮಹೇಶ್ ಅವರೇ ಸ್ಪಷ್ಟಪಡಿಸಿದ್ಧಾರೆ.
2018ರ ಚುನಾವಣೆಯಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರು, ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು. ಆದರೆ, ಮೈತ್ರಿ ಸರ್ಕಾರದ ಪತನದ ಸಂದರ್ಭದಲ್ಲಿ ನಡೆದ ಬಹುಮತ ಯಾಚನೆ ವೇಳೆ ಎನ್ ಮಹೇಶ್ ಅವರು ಸದನದಿಂದ ದೂರು ಉಳಿದಿದ್ದರು. ಇದರಿಂದ ಸಿಟ್ಟಾದ ಬಿಎಸ್ಪಿ ವರಿಷ್ಠೆ ಮಾಯಾವತಿ, ಮಹೇಶ್ರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.
ಬಿಎಸ್ಪಿಯಿಂದ ಉಚ್ಛಾಟನೆಗೊಂಡ ನಂತರ ಅವರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ತಮ್ಮ ನಡೆಯೇನು ಎಂಬುದನ್ನು ಸ್ಪಷ್ಟಪಡಿಸದಿದ್ದ ಮಹೇಶ್, ಇದೀಗ ಅಧಿಕೃತವಾಗಿ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ ಸಿಎಂ : ಇಂದೇ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್?
ಕಳೆದ ತಿಂಗಳು ಅವರು ತಾವು ಬಿಜೆಪಿ ಸೇರಲಿರುವ ಬಗ್ಗೆ ತಮ್ಮ ಬೆಂಬಲಿಗರು ಮತ್ತು ಮುಖಂಡರ ಅಭಿಪ್ರಾಯ ತಿಳಿಯಲು ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು. ಆಗಲೆ ಅವರ ಒಡನಾಡಿಗಳು ಮಹೇಶ್ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದ್ದರು.
ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಸವರಾಜ್ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆಯ ಮಾತುಕತೆಗಾಗಿ ಬಿಜೆಪಿ ಕೇಂದ್ರ ನಾಯಕತ್ವದ ಜೊತೆ ಸಮಾಲೋಚನೆ ನಡೆಸಲು ಈಗಾಗಲೆ ದೆಹಲಿ ತಲುಪಿದ್ದಾರೆ.
ಭಾನುವಾರದಂದು ಪತ್ರಕರ್ತರೊಂದಿಗೆ ಮಾತನಾಡಿದ್ದ ಬೊಮ್ಮಾಯಿ, ಸಂಪುಟ ರಚನೆಯು ಒಂದು ವಾರದೊಳಗೆ ಆಗುತ್ತದೆ, ಸೋಮವಾರ ಕೇಂದ್ರ ನಾಯಕತ್ವದ ನಿರ್ದೇಶನ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಒಲಿಂಪಿಕ್ಸ್ ಹಾಕಿ: ಸೆಮಿಫೈನಲ್ಗೆ 41 ವರ್ಷಗಳ ನಂತರ ಭಾರತ ಪುರುಷರು; ಮೊದಲ ಬಾರಿಗೆ ಮಹಿಳೆಯರು!