ಬಂಗಾಳದಲ್ಲಿ ನಟ ಮಿಥುನ್ ಚಕ್ರವರ್ತಿಗೆ ಅಪಮಾನ; ಟಿಕೆಟ್‌ ನಿರಾಕರಿಸಿದ BJP!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತಮಗೆ ಟಿಕೆಟ್‌ ಸಿಗುತ್ತದೆ ಎಂದು ಭಾವಿಸಿದ್ದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಹೆಸರು ಇಲ್ಲದಿರುವುದು ಅವರಿಗೆ ಭಾರೀ ಅಪಮಾನವನ್ನು ಉಂಟು ಮಾಡಿದೆ.

ಕೆಲವು ದಿನಗಳ ಹಿಂದೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ನಟ ಮಿಥುನ್‌ ಚಕ್ರವರ್ತಿ ರಾಶ್‌ಬೆಹರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಆ ಸ್ಥಾನಕ್ಕೆ ಕಾಶ್ಮೀರದ ಉಸ್ತುವಾರಿ ವಹಿಸಿಕೊಂಡಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಹಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇನ್ನು ದಕ್ಷಿಣ ಕೋಲ್ಕತ್ತದ ಸ್ಥಾನವನ್ನು ಮಿಥುನ್‌ಗೆ ಬಿಟ್ಟುಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ಅದೇ ಕಾರಣಕ್ಕೆ ಅವರು ತಮ್ಮ ಮತದಾರರ ಗುರುತಿನ ಚೀಟಿಯ ವಿಳಾಸವನ್ನು ಮುಂಬೈನಿಂದ ಕೋಲ್ಕತ್ತಾಗೆ ವರ್ಗಾಯಿಸಿಕೊಂಡಿದ್ದರು. ಆದರೆ ಅಲ್ಲಿಯೂ ಅವರ ಹೆಸರನ್ನು ಪ್ರಕಟಿಸಿಲ್ಲ.

ಆದರೂ ಅವರು ಕಣಕ್ಕಿಳಿಯಲೇಬೇಕೆಂದು ಬಯಸಿದರೆ ಈಗಿರುವ ಅಭ್ಯರ್ಥಿಗಳ ಬದಲಿಗೆ ಅವರನ್ನು ಕಣಕ್ಕಿಳಿಸಬಹುದು. ಅಂತಿಮ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಸಲು ಏಪ್ರಿಲ್ ಮಧ್ಯದವರೆಗೂ ಸಮಯವಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ನಾನು ಪಕ್ಕಾ ಕೋಬ್ರಾ. ಒಂದ್ಸಲ ಕಚ್ಚಿದರೆ ಅಷ್ಟೇ, ಫಿನಿಷ್’ ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿದ್ದ ನಟ ಮಿಥುನ್ ಚಕ್ರವರ್ತಿ ಈಗ ಬಿಜೆಪಿ ಪಾಲಿಗೆ ಸ್ಟಾರ್ ಪ್ರಚಾರಕ ಅಷ್ಟೇ ಆಗಿದ್ದಾರೆ. ಮಾರ್ಚ್ 30 ರಂದು ನಂದಿಗ್ರಾಮದಲ್ಲಿ ಸುವೇಂಧು ಅಧಿಕಾರಿ ಪರವಾಗಿ ಅಮಿತ್ ಶಾ ಜೊತೆಗೂಡಿ ಮಿಥುನ್ ಚಕ್ರವರ್ತಿ ರೋಡ್‌ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

Read Also: ಬ್ಯಾಂಕ್‌ಗಳನ್ನು ನಿರ್ವಹಸಲಾಗದೆ ಖಾಸಗೀಕರಣ ಮಾಡುತ್ತಿದ್ದೇವೆ: ನಿರ್ಮಲಾ ಸೀತಾರಾಮನ್‌ ರಾಜೀನಾಮೆಗೆ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights