ಪೆಟ್ಟಾದ ಹುಲಿ ಹೆಚ್ಚು ಅಪಾಯಕಾರಿ; ಎಂದಿಗೂ ತಲೆಬಾಗುವುದಿಲ್ಲ: ಮಮತಾ ಬ್ಯಾನರ್ಜಿ
ಕಾಲಿಗೆ ಪೆಟ್ಟಾಗಿರುವ ಹಿನ್ನೆಲೆಯಲ್ಲಿ ವೀಲ್ ಚೇರ್ನಲ್ಲಿ ಕುಳಿತು ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
ಭಾನುವಾರ ಗಾಂಧಿ ಮೂರ್ತಿಯಿಂದ ಹಜ್ರಾಕ್ಕೆ ವೀಲ್ ಚೇರ್ನಲ್ಲಿಯೇ ರೋಡ್ ಶೋ ನಡೆಸಿದ್ದು, ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು ಗಾಯಗೊಂಡ ಹುಲಿ ಅತೀ ಅಪಾಯಕಾರಿ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜನರು ನಮ್ಮ ಪಕ್ಷಕ್ಕೆ ಮತ ಹಾಕಿದರೆ ಪ್ರಜಾಪ್ರಭುತ್ವವನ್ನು ನಾನು ಜನರಿಗೆ ಮರಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬಂಗಾಳದ ವಿರುದ್ಧ ಸೃಷ್ಟಿಸಿರುವ ಎಲ್ಲಾ ಸಂಶಯಗಳು, ವಿವಾದಗಳು ಮತ್ತು ಅಪಪ್ರಚಾರಗಳು ಕೊನೆಗೊಳ್ಳಲಿವೆ. ನನ್ನ ಕಾಲು ಮುರಿದರೂ ನಾನು ವ್ಹೀಲ್ ಚೇರ್ ಬಳಸಿಕೊಂಡು ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತೇನೆ. ಖೇಲಾ ಹೋಬೆ… ಗಾಯಗೊಂಡ ಹುಲಿಯು ಅತಿ ಅಪಾಯಕಾರಿ ಪ್ರಾಣಿಯಾಗಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ನಾವು ಧೈರ್ಯದಿಂದ ಹೋರಾಡುತ್ತೇವೆ! ನಾನು ಇನ್ನೂ ಸಾಕಷ್ಟು ನೋವಿನಲ್ಲಿದ್ದೇನೆ. ಆದರೆ ನನ್ನ ಜನರ ನೋವು ನನಗಿಂತಲೂ ದೊಡ್ಡದು ಎಂದು ಭಾವಿಸುತ್ತೇನೆ. ನಮ್ಮ ಪುಣ್ಯ ಭೂಮಿಯನ್ನು ರಕ್ಷಿಸುವ ಈ ಹೋರಾಟದಲ್ಲಿ, ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಹೆಚ್ಚು ತೊಂದರೆಗಳನ್ನು ಅನುಭವಿಸಿದ್ದೇವೆ. ಆದರೆ ನಾವು ಎಂದಿಗೂ ಹೇಡಿಯಂತೆ ತಲೆಬಾಗುವುದಿಲ್ಲ!” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಂಧ್ರ ಸ್ಥಳೀಯ ಚುನಾವಣೆ: ಅಷ್ಟೂ ಸಂಸ್ಥೆಗಳಲ್ಲಿ YSR ಕಾಂಗ್ರೆಸ್ ಭರ್ಜರಿ ಗೆಲುವು; ಲಿಸ್ಟ್ಯಿಂದ ಕಾಣೆಯಾದ BJP-ಕಾಂಗ್ರೆಸ್!