Ind v/s Eng: ಟೆಸ್ಟ್ ಬೇಡ ಎಂದರೆ ವಾಕ್ಓವರ್ ಕೊಡಿ; ಇಂಗ್ಲೆಂಡ್ಗೆ ಖಡಕ್ ಉತ್ತರ ಕೊಟ್ಟ ಭಾರತ ತಂಡ!
ಇಂಗ್ಲೆಂಡ್ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಐಸಿಸಿ ಟೆಸ್ಟ್ ಸರಣಿ ನಡೆಯುತ್ತಿವೆ. ಉಭಯ ತಂಡಗಳ ನಡುವೆ ಐದನೇ ಮತ್ತು ಅಂತಿಮ ಟೆಸ್ಟ್ ಮ್ಯಾಚ್ ನಡೆಯಬೇಕಿದ್ದು, ಭಾರತ ತಂಡದ ಸಹಾಯಕರೊಬ್ಬರಿಗೆ ಕೊರೊನಾ ಧೃಢಪಟ್ಟಿರುವುದರಿಂದ ಪಂದ್ಯವನ್ನು ರದ್ದುಗೊಳಿಸುವ ಚರ್ಚೆ ನಡೆಯುತ್ತಿವೆ.
ಈ ನಡುವೆ, ಪಂದ್ಯವನ್ನು ರದ್ದುಗೊಳಸಬೇಕೆಂದರೆ ಭಾರತ ತಂಡ ಪಂದ್ಯವನ್ನು ಸೋತಿದ್ದೇವೆ ಎಂದು ಒಪ್ಪಿಕೊಳ್ಳಬೇಕು. ಪಂದ್ಯದ ರದ್ದತಿಗೆ ಅದೊಂದೇ ಮಾರ್ಗ ಎಂದು ಬಿಸಿಸಿಐ ಮುಂದೆ ಇಸಿಬಿ ಪ್ರಸ್ತಾಪ ಇಟ್ಟಿದೆ ಎಂದು ಹೇಳಲಾಗಿದೆ.
ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿರುವ ಭಾರತ ತಂಡದ ನಾಯಕ ಮತ್ತು ಉಪನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ನಾವು ಕೊರೊನಾ ಸೋಂಕಿನ ಆತಂಕದ ನಡಿವೆಯೂ ಪಂದ್ಯವನ್ನು ಆಡುತ್ತೇವೆಯೇ ಹೊರತು ಪಂದ್ಯವನ್ನು ಸೋತೆವೆಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪಂದ್ಯದ ರದ್ದತಿಯ ಬಗ್ಗೆ ಇಸಿಬಿಯನ್ನು ಭೇಟಿ ಮಾಡಿದ್ದ ಬಿಸಿಸಿಐ ನಿಯೋಗವು ತಂಡದ ಇಬ್ಬರು ಹಿರಿಯ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಭಾರತ ಈಗಾಗಲೇ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ವಾಕ್ ಓವರ್ ನೀಡಿದರೆ ಸರಣಿಯು 2-2ರಿಂದ ಸಮಬಲಗೊಳ್ಳುತ್ತದೆ ಎಂದು ಹೇಳಲಾಗಿದೆ.
ಈ ಹಿಂದೆ ಭಾರತ ಕ್ರಿಕೆಟ್ ತಂಡದ ಜೂನಿಯರ್ ಫಿಸಿಯೋ ಯೋಗೀಶ್ ಪರ್ಮಾರ್ ಅವರು ಕೋವಿಡ್ -19 ಗೆ ತುತ್ತಾದರು. ಶುಕ್ರವಾರದಿಂದ ನಿಗದಿಯಾಗಿದ್ದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್ ಮುಂದುವರಿಯುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಖಚಿತವಾಗಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಮುಖ್ಯ ತರಬೇತುದಾರ ರವಿಶಾಸ್ತ್ರಿ ಮತ್ತು ಬೌಲಿಂಗ್ ತರಬೇತುದಾರ ಭರತ್ ಅರುಣ್ ನಂತರ, ಸಹಾಯಕ ಸಿಬ್ಬಂದಿಯ ಇನ್ನೊಬ್ಬ ಸದಸ್ಯರು ಕೊರೊನಾಗೆ ತುತ್ತಾದ ಬಳಿಕ ತಂಡವು ಗುರುವಾರ ತನ್ನ ಅಭ್ಯಾಸದ ಅವಧಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ. ಈ ಸಮಯದಲ್ಲಿ ಪಂದ್ಯ ನಡೆಯುತ್ತದೆಯೇ ಎಂದು ನಮಗೆ ಗೊತ್ತಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.