ಸಿಎಂ ಬೊಮ್ಮಾಯಿಗೆ ಕೊಲೆ ಬೆದರಿಕೆ ಹಾಕಿದ್ದ ವಿಹೆಚ್ಪಿ ಮುಖಂಡ ಯೂಟರ್ನ್!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಕೊಲೆ ಬೆದರಿಕೆ ಹಾಕಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅವರು ಇದೀಗ ಯೂಟರ್ನ್ ಹೊಡೆದಿದ್ದಾರೆ.
ಧರ್ಮೇಂದ್ರ ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ನಂತರ, “ನನ್ನ ಹೇಳಿಕೆಯನ್ನು ತಿರುಚಲಾಗಿದೆ” ಎಂದು ಧಮೇಂದ್ರ ನುಣುಚಿಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಸೇವಾ ತೆರಿಗೆ ಹಂಚಿಕೆ ಮಾಡದ ಕೇಂದ್ರ; ಹಣಕಾಸು ಆಯೋಗದ ಶಿಫಾರಸ್ಸಿಗೂ ಕಿಮ್ಮತ್ತಿಲ್ಲ!
ದೇವಸ್ಥಾನ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ್ದ ಧರ್ಮೇಂದ್ರ, “ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ ಸ್ವಾಮಿ, ನೀವು ಯಾವ ಲೆಕ್ಕ? ಗಾಂಧೀಜಿಯವರನ್ನು ಹತ್ಯೆ ಮಾಡುತ್ತೇವೆಂದರೆ ನಿಮ್ಮ ವಿಚಾರದಲ್ಲಿ ಯಾವ ತೀರ್ಮಾನಕ್ಕೆ ಬರಬಹುದು” ಎಂದು ಹೇಳಿಕೆ ನೀಡಿದ್ದರು. ರಾಷ್ಟ್ರಪಿತ ಗಾಂಧೀಜಿಯವರ ಹತ್ಯೆಯನ್ನು ಸಮರ್ಥಿಸಿದ್ದಷ್ಟೇ ಅಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮೇಂದ್ರ ವಿಡಿಯೋ ವೈರಲ್ ಆಗಿತ್ತು.
“ಹಿಂದೂವಾಗಿ ನಮ್ಮ ಶ್ರದ್ಧೆಯ ಕೇಂದ್ರ ದೇವಸ್ಥಾನ ಧ್ವಂಸವಾದ ಬಗ್ಗೆ ಅಸಹನೆಯಿಂದ ಮಾತನಾಡಿದ್ದೇನೆ. ಇದರ ಹಿಂದೆ ಯಾವುದೇ ಬೆದರಿಕೆ ಹಾಕುವ ದುರುದ್ದೇಶ ಇಲ್ಲ. ಗಾಂಧೀಜಿ ಹತ್ಯೆಯ ಕಾರಣವನ್ನು ವಿವರಿಸುವ ಭರದಲ್ಲಿ ಈ ಹೇಳಿಕೆ ಬಂದಿದೆ. ಈ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸುತ್ತೇನೆ. ಗಾಂಧೀಜಿ ಹತ್ಯೆ ಕುರಿತಂತೆ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಿರುಚಲಾಗಿದ್ದು, ಹೇಳಿಕೆಯ ಉದ್ದೇಶವನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ” ಎಂದು ಯೂಟರ್ನ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ‘ನಾವು ಗಾಂಧಿಯನ್ನೇ ಬಿಟ್ಟಿಲ್ಲ, ನೀವು ಯಾವ ಲೆಕ್ಕ?’ ಧರ್ಮೇಂದ್ರ ಪ್ರಚೋದಕಾರಿ ಹೇಳಿಕೆ!