ಶೃಂಗೇರಿಯಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳು ಸಂಘಪರಿವಾರದವರು!
ಬಾಲಕಿಯೊಬ್ಬಳ ಮೇಲೆ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಶೃಂಗೇರಿಯಲ್ಲಿ ನಡೆದಿದ್ದು, ಸುಮಾರು 30 ಕಾಮುಕರು ಅತ್ಯಾಚಾರ ಎಗಿದ್ದಾರೆ. ಇವರಲ್ಲಿ ಹಲವರು ಸಂಘಪರಿವಾರ, ಬಂಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ.
ಈಗಾಗಲೇ ಪೊಲೀಸರು 08 ಮಂದಿಯನ್ನು ಬಂಧಿಸಿದ್ದು, ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದ ಸ್ಮಾಲ್ ಅಭಿ, ಆನೆಗುಂದ ಗ್ರಾಮದ ರಾಜೇಶ್, ಅಮಿತ್, ಗಿರೀಶ್, ಹೊಳೆಕೊಪ್ಪ ಗ್ರಾಮದ ಮಣಿಕಂಠ, ವಿಕಾಸ್, ನೆಮ್ಮಾರ್ ಸಂಪತ್, ಶೃಂಗೇರಿಯ ನಾರಾಯಣ್ ಗೌಡ, ಅಶ್ವತ್ಗೌಡ, ಅಭಿಗೌಡ, ಕುರುಬಗೆರೆ ಸಂತೋಷ್, ಹೆಗ್ಗದ್ದೆಯ ಧೀಕ್ಷಿತ್, ಹೇರೂರಿನ ಸಂತೋಷ್, ಕಿಗ್ಗಾದ ನಿರಂಜನ್, ಬಸ್ ಚಾಲಕ ಖಾಂಡ್ಯ ಯೋಗೀಶ್ ಎಂಬ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ಮೂಲದ 15 ವರ್ಷ ಬಾಲಕಿ ತನ್ನ ತಾಯಿ ನಿಧನರಾದ ನಂತರ ತನ್ನ ಚಿಕ್ಕಮ್ಮನೊಂದಿಗೆ ಇತ್ತೀಚೆಗೆ ಶೃಂಗೇರಿ ತಾಲೂಕಿನ ಕುಂಚೇಬೈಲು ಸಮೀಪದಲ್ಲಿರುವ ಗೋಚುವಳ್ಳಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಅಲ್ಲಿನ ಕೆಲಸಗಾರನೊಬ್ಬ ಬಾಲಕಿಯನ್ನು ಪುಸಲಾಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಆತನ ಸ್ನೇಹಿತರೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಲೈಂಗಿಕ ದೌರ್ಜನ್ಯದ ವಿಷಯವನ್ನು ಬಾಯಿ ಬಿಟ್ಟರೆ ಸಾಮಾಜಿಕ ಜಾಲತಾಣಗಳಲ್ಲಿ ಪೊಟೊಗಳನ್ನು ವೈರಲ್ ಮಾಡುವುದಾಗಿ ಬಾಲಕಿಯನ್ನು ಹೆದರಿಸಿದ್ದಾರೆ. ನಂತರ ಈ ಬಾಲಕಿಯ ಮೇಲೆ ಕಳೆದ 1 ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಯುತ್ತಲೇ ಬಂದಿದೆ. ಇದನ್ನು ಬಾಲಕಿಯ ಚಿಕ್ಕಮ್ಮ ಗೀತಾ ಎಂಬುವವರು ದಂಧೆಯನ್ನಾಗಿ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದರು ಎಂದೂ ಸಹ ಹೇಳಲಾಗುತ್ತಿದೆ.
ಹೀಗಾಗಿ, ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಮ್ಮ ಗೀತಾಳನ್ನು 16ನೇ ಆರೋಪಿಯನ್ನಾಗಿಸಲಾಗಿದೆ. ಅಲ್ಲದೇ ಬಾಲ ಕಾರ್ಮಿಕರನ್ನು ಕ್ರಷರ್ ನಲ್ಲಿ ಕೆಲಸಕ್ಕೆ ನೇಮಿಸಿಕೊಂಡ ಆರೋಪದಡಿಯಲ್ಲಿ ಕ್ರಷರ್ ಮಾಲಕನ್ನು 17ನೇ ಆರೋಪಿಯನ್ನಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬಾಲಕಿಗೆ ಲೈಂಗಿಕ ದೌರ್ಜನ್ಯದ ಕಿರುಕುಳ ನೀಡಿರುವ ಆರೋಪಿಗಳ ಪೈಕಿ ಬಹುತೇಕ ಮಂದಿ ಸಂಘಪರಿವಾರದಲ್ಲಿ ಗುರುತಿಸಿಕೊಂಡವರಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಸ್ಮಾಲ್ (ಸ್ಮಾಲ್ ಸಿಗರೇಟ್ ಸೇದುತ್ತಿದ್ದ) ಅಭಿ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದಾನೆ. ಮಣಿಕಂಠ ಎಂಬಾತ ಶೃಂಗೇರಿ ತಾಲೂಕು ಬಿಜೆಪಿ ಯುವಮೋರ್ಚಾದ ಸದಸ್ಯನಾಗಿದ್ದಾನೆ. ಇನ್ನು ವಿಕಾಸ್ ಎಂಬಾತ ಬಿಜೆಪಿ ಪಕ್ಷದ ಜಿ.ಪಂ ಸದಸ್ಯರೊಬ್ಬರ ಹತ್ತಿರದ ಸಂಬಂಧಿ ಎನ್ನಲಾಗುತ್ತಿದೆ. ಸಂಪತ್ ಎಂಬಾತ ಸನಾತನ ಸಂಸ್ಥೆಯ ಸದಸ್ಯ ಎನ್ನಲಾಗುತ್ತಿದ್ದು, ಇವರು ಸಂಘಪರಿವಾರದೊಂದಿಗೆ ಗುರುತಿಸಿಕೊಂಡಿರುವ ಪೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ರಕ್ಷಿಸಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಎಂಬವವರು ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದು, “ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಮ್ಮ ಮತ್ತು ಕ್ರಷರ್ನ ಮಾಲಿಕ ಸೇರಿದಂತೆ 17 ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸಲು ತನಿಖೆ ನಡೆಸುತ್ತಿದ್ದೇವೆ ಎಂದು ಶೃಂಗೇರಿ ಪೊಲೀಸ್ ಠಾಣೆಯ ಎಸ್ಐ ಪ್ರಮೋದ್ ಕುಮಾರ್ ತಿಳಿಸಿದರು.
ಕ್ರಷರ್ ನಲ್ಲಿ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ಪರಿಶೀಲನೆ ನಡೆಸಿದಾಗ ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ಗೋಚವಳ್ಳಿಯ ಕ್ರಷರ್ ನಿಂದ ರಕ್ಷಣೆ ಮಾಡಲಾಗಿದೆ. ನಂತರ ಕೌನ್ಸಲಿಂಗ್ ವೇಳೆ ತನ್ನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಬಾಲಕಿ ಹೇಳಿಕೆ ನೀಡಿದ್ದಾಳೆ. ದೌರ್ಜನ್ಯ ಎಸಗಿದ ಸ್ಥಳೀಯ 15 ಮಂದಿಯ ಹೆಸರನ್ನು ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ತನ್ನ ಚಿಕ್ಕಮ್ಮ ಗೀತಾ ಎಂಬಾಕೆಯೂ ಸಹಕಾರ ನೀಡಿದ್ದಾಳೆಂದು ಬಾಲಕಿ ಹೇಳಿಕೆ ನೀಡಿದ್ದಾಳೆ.
ಕ್ರಷರ್ನಿಂದ ಬಾಲಕಿಯನ್ನು ರಕ್ಷಣೆ ಮಾಡಿರುವ ಮಕ್ಕಳ ಕಲ್ಯಾಣ ಸಮಿತಿ ಆಕೆಯನ್ನು ಸದ್ಯ ಸ್ವಾಧಾರ್ ಕೇಂದ್ರದಲ್ಲಿ ಇರಿಸಿದ್ದು, ಆಕೆಯ ಹೇಳಿಕೆ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ತಮ್ಮ ಪ್ರಭಾವ ಬಳಸಿ ಪಾರಾಗುವ ಸಾಧ್ಯತೆ ಇದ್ದು, ಪೊಲೀಸರು ಈ ಸಂಬಂಧ ಅಗತ್ಯ ಕ್ರಮವಹಿಸಬೇಕೆಂದು ಅಲ್ಲಿನ ಸ್ಥಳೀಯರೊಬ್ಬರು ಮಾಹಿತಿ ನೀಡಿದರು.
ಬಾಲಕಿಯ ಹಿನ್ನೆಲೆ:
ಬಾಲಕಿ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಆಗಲೇ ಈಕೆಯ ತಾಯಿ ನಿಧನರಾಗಿದ್ದರು. ನಂತರ ಬಾಲಕಿಯ ತಂದೆ ಮತ್ತೊಂದು ಮದುವೆಯಾಗಿ ಹಾವೇರಿಯಲ್ಲಿ ವಾಸವಿದ್ದಾನೆ. ಬಾಲಕಿ ತನ್ನ ತಾಯಿಯ ತಮ್ಮನ ಮನೆಯಲ್ಲಿ ಓದುತ್ತಿದ್ದಳು. ಲಾಕ್ಡೌನ್ ಸಂದರ್ಭದಲ್ಲಿ ಶೃಂಗೇರಿಯ ಚಿಕ್ಕಮ್ಮನ ಮನೆಗೆ ಬಂದಿದ್ದು, ಬಾಲಕಿ ಚಿಕ್ಕಮ್ಮ ಮನೆಯ ಸಮೀಪದಲ್ಲೇ ಇದ್ದ ಕ್ರಷರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಚಿಕ್ಕಮ್ಮನಿಗೆ ಆರೋಗ್ಯ ಸರಿಯಿಲ್ಲದ ಸಂದರ್ಭದಲ್ಲಿ ಬಾಲಕಿ ಕ್ರಷರ್ನಲ್ಲಿ ಕೆಲಸಕ್ಕೆ ಹೋಗಿದ್ದಾಳೆ. ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಆಕೆಯನ್ನು ಮರುಳು ಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ನಂತರ ತನ್ನ ಸ್ನೇಹಿತರೊಂದಿಗೂ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಾನೆ.
ಆರೋಪಿ ಗೀತಾಳ ಹಿನ್ನೆಲೆ:
ಈಕೆ ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳಾಗಿದ್ದು, ಮೂಲತಃ ಹಾವೇರಿ ಜಿಲ್ಲೆಯವಳು. ಶೃಂಗೇರಿಯಲ್ಲಿ ಬ್ರಾಹ್ಮಣ ಯುವಕರಿಗೆ ಹೆಣ್ಣು ಸಿಗದ ಕಾರಣಕ್ಕೆ ಈಕೆಯನ್ನು ಸುರೇಶ್ ಎಂಬುವವರು ಮದುವೆಯಾಗಿ ಶೃಂಗೇರಿಗೆ ಕರೆದುಕೊಂಡುಬಂದಿದ್ದರು. ಇಲ್ಲಿ ಈಕೆ ಮೊದಲಿನಿಂದಲೂ ಇಂತಹ ದಂಧೆಯಲ್ಲಿ ತೊಡಗಿದ್ದಳು. ನಂತರ ತನ್ನ ಅಕ್ಕನ ಮಗಳನ್ನು ಹಾವೇರಿಯಿಂದ ಕರೆದುಕಂಡು ಬಂದು ಆಕೆಯನ್ನೂ ಇದೇ ದಂಧೆಗೆ ಬಳಸಿಕೊಂಡು ಹಣ ಸಂಪಾದಿಸುತ್ತಿದ್ದಳು. ಇದನ್ನು ಸಹಿಸದ ಸುರೇಶ್ ವಿಚ್ಚೇದನ ಪಡೆಯಲು ನಿರ್ಧರಿಸಿದ. ಆದರೆ ಕಾನೂನು ಪ್ರಕಾರ ಗಂಡನೇ ವಿಚ್ಚೇದನ ನೀಡಿದರೆ ಜೀವನಾಂಶ ಕೊಡಬೆಕಾಗುತ್ತದೆ. ಆದರೆ ಆತನ ಬಳಿ ಅಷ್ಟು ಹಣ ಇಲ್ಲವಾದ್ದರಿಂದ ಗ್ರಾಮಸ್ಥರ ಸಹಕಾರದೊಟ್ಟಿಗೆ ಸೇರಿ, ಈ ದಂಧೆಯನ್ನ ಕಾರಣವಾಗಿಟ್ಟುಕೊಂಡು ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಈ ದೂರನ್ನು ತೆಗೆದುಕೊಂಡಿರಲಿಲ್ಲ . ನಂತರ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ಆದೇಶ ಬಂದ ನಂತರ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು.
ಇನ್ನೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಶೇಖಡ 90 ರಷ್ಟು ಆರೋಪಿಗಳು ಬಿಜೆಪಿ ಮತ್ತು ಸಂಘಪರಿವಾರದವರೆಂದು ಗ್ರಾಮಸ್ಥರು ಖಚಿತಪಡಿಸಿದ್ದಾರೆ.
Read Also: ರೈತ ಹೋರಾಟ ಬೆಂಬಲಿಸಿ ವರದಿ ಮಾಡಿದ ಪತ್ರಕರ್ತೆ; ABVP ಕಾರ್ಯಕರ್ತನಿಂದ ಅತ್ಯಾಚಾರ-ಕೊಲೆ ಬೆದರಿಕೆ!