ವಿಜಯೇಂದ್ರ ಹೆಸರೇಳಿ ವಂಚನೆ ಪ್ರಕರಣ; ಶ್ರೀರಾಮುಲು ಆಪ್ತ ಸಹಾಯಕ ಬಿಡುಗಡೆ!
ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೆಸರನಲ್ಲಿ ವಂಚನೆ ಎಸಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿತನಾಗಿದ್ದ ರಾಜು ಅಲಿಯಾಸ್ ರಾಜಣ್ಣ (ಶ್ರೀರಾಮುಲು ಆಪ್ತ ಸಹಾಯಕ)ನನ್ನು ವಿಚಾರಣೆಯ ಬಳಿಕ ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ಜಯೇಂದ್ರ ನೀಡಿದ್ದ ದೂರು ಆಧರಿಸಿ ಶ್ರೀರಾಮುಲು ಅವರ ಮನೆ ಆವರಣದಲ್ಲೇ ರಾಜಣ್ಣನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು.
ಇತ್ತೀಚೆಗೆ ರಾಜಣ್ಣ ಎಂಬಾತ ವಿಜಯೇಂದ್ರ ಮೂಲಕ ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಉದ್ಯಮಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಎನ್ನಲಾಗಿದೆ. ಅಲ್ಲದೆ, ಹಲವಾರು ಜನರಿಗೆ ಕೆಲಸ ಕೊಡಿಸುವುದಾಗಿ ಮತ್ತು ವರ್ಗಾವಣೆ ಮಾಡಿಸುವುದಾಗಿ ಆಮಿಷವೊಡ್ಡಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಉದ್ಯಮಿಯೊಬ್ಬರೊಂದಗೆ ರಾಜಣ್ಣ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ವಿಜಯೇಂದ್ರ ಹೆಸರು ಹೇಳಿದ್ದ ಆರೋಪಿ, ರಾಜ್ಯ ಸರ್ಕಾರದಲ್ಲಿ ಸಿಎಂ ಪುತ್ರ ವಿಜಯೇಂದ್ರ ಅವರದ್ದೇ ಮಾತು ನಡೆಯುವುದು. ಅವರ ಮೂಲಕ ತಮಗೆ ಕೆಲಸ ಮಾಡಿಸಿಕೊಡುವುದಾಗಿ ಹೇಳಿದ್ದ, ಅದರಂತೆ ಆತ ಹಣವನ್ನು ಪಡೆದುಕೊಂಡಿದ್ದ ಎಂದು ಹೇಳಲಾಗಿದೆ.
ಆಡಿಯೋವನ್ನು ಆಧರಿಸಿ ವಿಜಯೇಂದ್ರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಆರೋಪಿ ರಾಜಣ್ಣನನ್ನು ಗುರುವಾರ ಬಂಧಿಸಲಾಗಿತ್ತು. ವಿಚಾರಣೆಯ ಬಳಿಕ ಆತನನ್ನು ಬಿಡುಗಡೆ ಮಾಡಿದ್ದು, ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗುವಂತೆ ಆತನಿಗೆ ಸಿಸಿಬಿ ಪೋಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ನನ್ನ ತಪ್ಪಿನಿಂದಾಗಿ ರಾಹುಲ್ಗಾಂಧಿ ಕೆಟ್ಟ ಟ್ರೋಲ್ಗೆ ಒಳಗಾದರು; ಕಾಂಗ್ರೆಸ್ ಐಟಿ ಸೆಲ್ ತೊರೆಯಲು ಕಾರಣ ಬಿಚ್ಚಿಟ್ಟ ರಮ್ಯಾ!