ಸಂಕ್ರಾಂತಿಗೆ ಸಿಗುತ್ತಾ ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ..? ನಿರೀಕ್ಷೆ ಹೆಚ್ಚಿಸಿದ ಸಿಎಂ ದೆಹಲಿ ಪ್ರಯಾಣ!
ಇಷ್ಟು ದಿನ ಕಾದಿರುವ ಸಚಿವಾಕಾಂಕ್ಷಿಗಳಿಗೆ ಸಂಪುಟದ ಬಾಗಿಲು ತೆರೆದುಕೊಳ್ಳುತ್ತಾ..? ಯಾರಿಗೆ ಸಚಿವ ಸ್ಥಾನ ಸಿಗುತ್ತೆ..? ಸಂಕ್ರಾಂತಿಗೆ ಸಿಗುತ್ತಾ ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ..? ಹೀಗೆ ಹಲವಾರು ಪ್ರಶ್ನೆಗಳು ಸಿಎಂ ನಡೆಯಿಂದಾಗಿ ಬಿಜೆಪಿಯಲ್ಲಿ ಚಿಗುರೊಡೆಯುತ್ತಿವೆ.
ಕಳೆದ ಕೆಲ ತಿಂಗಳುಗಳಿಂದ ಸಚಿವ ಸಂಪುಟ ವಿಸ್ತರಣೆ ಹವಾ ರಾಜ್ಯ ರಾಜಕೀಯದಲ್ಲಿ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಸಚಿವ ಸ್ಥಾನಕ್ಕಾಗಿ ಕಾದು ಕಾದು ಸುಸ್ತಾದ ಆಕಾಂಕ್ಷಿಗಳಿಗೆ ಈ ಬಾರಿ ಸಂಕ್ರಾಂತಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಎದ್ದು ಕಾಣುತ್ತಿದೆ.
ಹೌದು… ಬಹುನಿರೀಕ್ಷಿತ 6 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಚಿಂತನೆ ನಡೆಸಿದ ಸಿಎಂ, ಬಸವಕಲ್ಯಾಣ ಮತ್ತು ಮಸ್ಕಿ ಬೈಎಲೆಕ್ಷನ್ ಮೊದಲೇ ಸಚಿವ ಸ್ಥಾನ ತುಂಬಿಸಲು ಮುಂದಾಗಿದ್ದಾರೆ. ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ ಒಪ್ಪಿಗೆ ಸೂಚಿಸುತ್ತದೆ ಎಂಬ ಒಂದಿಷ್ಟು ನಿರೀಕ್ಷೆಗಳಿಂದ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.
ಇದರಿಂದಾಗಿ 6 ಆಕಾಂಕ್ಷಿಗಳಿಗೆ ಅದೃಷ್ಟ ಸಂಕ್ರಾಂತಿಗೆ ಒಲಿಯುವ ಸಾಧ್ಯತೆ ಹೆಚ್ಚಾಗಿ ಗೋಚರಿಸುತ್ತಿದ್ದು, ಬಿಜೆಪಿ ವಲಯದಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಸಚಿವ ಸ್ಥಾನಕ್ಕಾಗಿ ವಲಸೆ ಹಾಗೂ ಮೂಲ ಬಿಜೆಪಿಯರಲ್ಲಿ ಸಾಕಷ್ಟು ಪೈಪೋಟಿ ನಡೆದಿದೆ. ಒಂದು ವೇಳೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದರೆ 6 ಮಂದಿಗೆ ಸಚಿವ ಸ್ಥಾನ ಸಿಗುತ್ತದೆ. ಮೂಲ ಬಿಜೆಪಿಗರಾದ ಬೆಳಗಾವಿ ಉಮೇಶ್ ಕತ್ತಿ, ಬೆಂಗಳೂರಿನ ಅರವಿಂದ್ ಲಿಂಬಾವಳಿ, ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣಿಕರ್ತರಾದ ಸಿ.ಪಿ ಯೋಗೇಶ್ವರ್, ಆರ್. ಆರ್ ನಗರದಲ್ಲಿ ಗೆದ್ದ ಮುನಿರತ್ನಾಗೂ ಸಚಿವ ಸ್ಥಾನ ಫಿಕ್ಸ್ ಎನ್ನಲಾಗುತ್ತಿದೆ. ಇನ್ನೂ ಎಂಬಿಟಿ ನಾಗರಾಜ್ , ಆರ್ ಶಂಕರ್ ಬಹುತೇಕ ಸಚಿವ ಸ್ಥಾನ ಖಾತರಿಯಾಗಿದೆ.
ವಲಸೆ ಬಿಜೆಪಿಗರಿಗೆ ಮಣೆ ಹಾಕಲು ಹೊರಟಿರುವ ಸರ್ಕಾರದ ವಿರುದ್ಧ ಮೂಲ ಬಿಜೆಪಿಗರು ಕೆಂಡಕಾರುತ್ತಿದ್ದಾರೆ. ಇನ್ನೂ ಕೋರ್ಟ್ ಅಡೆತಡೆಯಿಂದ ವಿಶ್ವನಾಥ್ ಗೆ ಸಚಿವ ಸ್ಥಾನ ಕೈಪತ್ತುವ ಸಾಧ್ಯತೆ ಇದೆ. ಆದರೆ ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಿರಲು ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದ್ದು ಅಸಮಾಧನದ ಹೊಗೆ ಬೂದಿ ಮುಚ್ಚಿದ ಕೆಂಡದಂತಿದೆ.