ನಮ್ಮಲ್ಲಿಯೇ ಲಸಿಕೆ ಕೊರತೆ ಇರುವಾಗ ವಿದೇಶಗಳಿಗೆ 05 ಕೋಟಿ ಡೋಸ್‌ ರಫ್ತುಮಾಡಿದ್ದರ ಅರ್ಥವೇನು?: ಪಂಜಾಬ್‌ ಸಿಎಂ

ಭಾರತದಲ್ಲಿ ತಯಾರಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ಗಳ ಕೋಟ್ಯಂತರ ಡೋಸ್‌ಗಳನ್ನು ಹಲವಾರು ದೇಶಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ದೇಶದಲ್ಲಿಯೇ ಹಲವಾರು ರಾಜ್ಯಗಳು ಲಸಿಕೆಯ ಕೊರತೆಯಿದೆ, ರಾಜ್ಯಗಳಿಗೆ ಮತ್ತಷ್ಟು ಡೋಸ್‌ ಲಸಿಕೆಗಳನ್ನು ಕಳುಹಿಸಿ ಎಂದು ಕೇಳುತ್ತಿರುವ ಸಂದರ್ಭದಲ್ಲಿ ಹೊರ ದೇಶಗಳಿಗೆ ಲಸಿಕೆ ಕೊಡುತ್ತಿರುವುದರ ಅರ್ಥವೇನು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರಶ್ನಿಸಿದ್ದಾರೆ.

“ಇತರ ದೇಶಗಳಿಗೆ 5 ಕೋಟಿ ಡೋಸ್ ಉಡುಗೊರೆಯಾಗಿ ಕೊಡುವುದರ ಅರ್ಥವೇನು? ನಮ್ಮ ದೇಶದ ಜನರ ಸ್ತಿತಿ ಏನು? ಭಾರತೀಯರ ಬಗ್ಗೆ ಏನು? ನಾವು ಅದನ್ನು ಮೊದಲು ಪಡೆಯುವುದಿಲ್ಲವೇ? ನಿಮ್ಮ ಬಳಿ ಇದ್ದರೆ ಅದನ್ನು (ಲಸಿಕೆಗಳನ್ನು) ನೀಡಬೇಡಿ ಎಂದು ನಾನು ಹೇಳುತ್ತಿಲ್ಲ, ಆದರೆ ನಿಮ್ಮ ಬಳಿ ಇಲ್ಲದಿದ್ದರೆ, ಆದ್ಯತೆಯು ಭಾರತೀಯರಿಗೆ ಲಸಿಕೆ ಒದಗಿಸುವುದು ಆಗಿರಬೇಕು, ಲಸಿಕೆಗಳನ್ನು ಇತರರಿಗೆ ಸ್ನೇಹಪೂರ್ವಕವಾಗಿ ನೀಡಬಾರದು. ಮೊದಲು ಲಸಿಕೆಯನ್ನು ನನಗೆ ನೀಡಿ ಎಂದು ಪ್ರಧಾನ ಮಂತ್ರಿಯವರಿಗೆ ಸಭೆಯೊಂದರಲ್ಲಿ ಕೇಳಿದ್ದೆ’ ಎಂದು ಪಂಜಾಬ್‌ ಸಿಎಂ ಹೇಳಿದ್ದಾರೆ.

ಭಾರತದ ಲಸಿಕೆ ಉಪಕ್ರಮವು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಸಮುದಾಯದ ಪ್ರಶಂಸೆಯನ್ನು ಪಡೆಯಿತು. ದೇಶದ ಮಾನವೀಯ ಭಾವಸೂಚಕವು ಕಳೆದ ತಿಂಗಳು ಹಲವು ರಾಜ್ಯಗಳಿಗೆ ಮಾರಕವಾಗಿ ಪರಿಣಮಿಸಿತು, ಈಗಲೂ ಅದು ಸಮಸ್ಯೆಯಾಗಿಯೇ ಇದೆ. ಏಕೆಂದರೆ ಕೆಟ್ಟದಾಗಿ ಹಾನಿಗೊಳಗಾದ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಲಸಿಕಾ ಅಭಿಯಾನವನ್ನು ಹೆಚ್ಚಿಸಲು ಯೋಜಿಸಿದ್ದರಿಂದ ತೀವ್ರ ಲಸಿಕೆ ಕೊರತೆ ಎದುರಾಗಿದೆ.

“ಈಗ ಅವರು ದಿನಕ್ಕೆ ಎರಡು ಲಕ್ಷದವರೆಗೆ ಲಸಿಕೆ ಹಾಕಲು ಹೇಳುತ್ತಾರೆ … ನಾನು ಅದನ್ನು ಮಾಡಿದರೆ, ನನಗೆ ಒಂದೂವರೆ ದಿನಗಳ ಪೂರೈಕೆಗೆ ಆಗುವಷ್ಟು ಲಸಿಕೆ ಮಾತ್ರ ಇದೆ” ಎಂದು ಸಿಂಗ್ ಹೇಳಿದರು.

ಲಸಿಕಾ ಅಭಿಯಾನದಲ್ಲಿ ಆದ್ಯತೆ ನೀಡಬೇಕಾದ ನಿರ್ದಿಷ್ಟ ಗುಂಪುಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಬೇಕು ಎಂದು ಅಮರಿಂದರ್ ಸಿಂಗ್ ಒತ್ತಾಯಿಸಿದರು.

“ಅದನ್ನು ನಿರ್ಧರಿಸಲು ರಾಜ್ಯಗಳಿಗೆ ಬಿಡಿ. ದೆಹಲಿಗಿಂತ ನಮಗೆ ಬೇರೆ ಸಮಸ್ಯೆ ಇರಬಹುದು. ದೆಹಲಿ ಸಮಸ್ಯೆ ಮಹಾರಾಷ್ಟ್ರಕ್ಕಿಂತ ಭಿನ್ನವಾಗಿರಬಹುದು. ಕೇರಳದ ಸಮಸ್ಯೆಯೇ ಬೇರೆ ಇರಬಹುದು. ಲಸಿಕೆ ಬಳಕೆಯ ನಿರ್ಧಾರವನ್ನು ರಾಜ್ಯಗಳೇ ಮಾಡಿಕೊಳ್ಳೋಣ” ಎಂದು ಅವರು ಹೇಳಿದರು.

ಪ್ರಸ್ತುತ, ಕೇಂದ್ರವು 45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಮಾಡಲು ಅನುಮತಿಸುತ್ತದೆ. ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ ಹಲವಾರು ರಾಜ್ಯಗಳು ಲಸಿಕಾ ಅಭಿಯಾನವನ್ನು ಇತರ ವಯೋಮಾನದವರಿಗೂ ತೆರೆಯುವಂತೆ ಕೇಂದ್ರವನ್ನು ಒತ್ತಾಯಿಸಿವೆ.

ಎರಡನೇ ಕೋವಿಡ್ ಅಲೆಯಿಂದ ತತ್ತರಿಸಿದ ಭಾರತವು ಸತತ ಮೂರು ದಿನಗಳಿಂದ ದೈನಿಕ 2 ಲಕ್ಷಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳನ್ನು ಮತ್ತು ದೈನಿಕ 1000 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಶೇಕಡಾ 86 ರಷ್ಟು ಸಾವುಗಳು ಸಂಭವಿಸಿದ 10 ರಾಜ್ಯಗಳಲ್ಲಿ ಪಂಜಾಬ್ ಕೂಡ ಒಂದು.

ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್‌ ಒಂದೇ ಮಾರ್ಗವಲ್ಲ; ಬೆಂಗಳೂರು ಲಾಕ್‌ಡೌನ್‌ ಮಾಡುವುದಿಲ್ಲ: ಸಚಿವ ಆರ್‌ ಅಶೋಕ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights