ಧ್ವಜಾರೋಹಣ ವೇಳೆ ಧ್ವಜಸ್ತಂಭಕ್ಕೆ ವಿದ್ಯುತ್ ಸ್ಪರ್ಷ; ವಿದ್ಯಾರ್ಥಿ ಸಾವು!
ಸ್ವಾತಂತ್ರ್ಯ ದಿನಾಚರಣೆಗಾಗಿ ಶಾಲೆಯಲ್ಲಿ ಧ್ವಜಾರೋಹಣಕ್ಕಾಗಿ ಧ್ವಜಸ್ಥಂಭ ನಿಲ್ಲಿಸುತ್ತಿದ್ದ ವೇಳೆ ವಿದ್ಯುತ್ ತಗುಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಕರಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಲಾಗಿತ್ತು. ಈ ವೇಳೆ ಧ್ವಜಾರೋಹಣಕ್ಕಾಗಿ ಧ್ವಜಸ್ಥಂಭವನ್ನು ನಿಲ್ಲಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿ ಚಂದನ್ ಮತ್ತು ಇದೇ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪವನ್ ಮತ್ತು ಶಶಾಂಕ್ ಧ್ವಜಸ್ಥಂಭ ಸಿಲ್ಲಿಸಲು ಮುಂದಾಗಿದ್ದಾರೆ.
ಈ ವೇಳೆ ಶಾಲೆಯ ಬಳಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಧ್ವಜಸ್ಥಂಭ ಸ್ಪರ್ಶಿಷಿದೆ. ತಕ್ಷಣವೇ ವಿದ್ಯಾರ್ಥಿಗಳು ಚೀರಾಡಿದ್ದಾರೆ. ಶಾಲೆಯಲ್ಲಿದ್ದ ಶಿಕ್ಷಕರು ಹೊರಗೆ ಬರುವಷ್ಟರಲ್ಲಿಯೇ ಚಂದನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪವನ್ ಮತ್ತು ಶಶಾಂಕ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸುದ್ದಿ ತಿಳಿದ ಬಾಲಕರ ಪೋಷಕರು ಹಾಗೂ ಗ್ರಾಮಸ್ಥರು ಶಾಲೆ ಬಳಿ ಜಮಾಯಿಸಿ ಶಾಲಾ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಾತುರಿಯಲ್ಲಿ ಧ್ವಜಾರೋಹಣ ನೆರವೇರಿಸಲು ಮಕ್ಕಳಿಂದ ಧ್ವಜಸ್ತಂಭ ನಿಲ್ಲಿಸಲು ಹೇಳಿರುವುದು ಅವರ ನಿರ್ಲಕ್ಷ್ಯಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದು ಕೋರಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರೀಶ್, ಡಿವೈಎಸ್ಪಿ ಶ್ರೀನಿವಾಸ್, ವೃತ್ತ ನಿರೀಕ್ಷಕ ರಂಗಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಪಂ ಪಿಡಿಒಗಳು , ಶಿಕ್ಷಣ ಇಲಾಖೆಯ ಅಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದರು. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಇದನ್ನೂ ಓದಿ: ಅಮೃತ ಮಹೋತ್ಸವ: ಹಲವು ಅಮೃತ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ!