ಆರ್ಥಿಕ ನಷ್ಟ ದೇವರ ಆಟವಲ್ಲ; GST ಪರಿಹಾರವನ್ನು ಕೇಂದ್ರ ಸರ್ಕಾರವೇ ಭರಸಬೇಕು: ದೇವೇಗೌಡ
ಜಿಎಸ್ಟಿ ಜಾರಿಗೆ ತರುವ ಸಮಯದಲ್ಲಿ ರಾಜ್ಯಗಳಿಗೆ ಜಿಎಸ್ಟಿಯಿಂದ ಎದುರಾಗುವ ನಷ್ಟವನ್ನು 5 ವರ್ಷಗಳ ಕಾಲ ಕೇಂದ್ರ ಸರ್ಕಾರವೇ ತುಂಬಿ ಕೊಡಲಿದೆ ಎಂದು ಹೇಳಿದ್ದ ಸರ್ಕಾರ, ಈಗ ರಾಜ್ಯಕ್ಕೆ ಜಿಎಸ್ಟಿ ಪಾಲು ನೀಡಲು ನಿರಾಕರಿಸಿದೆ. ಜಿಎಸ್ಟಿ ಪರಿಹಾರ ಹಣದಲ್ಲಿ 2.35 ಲಕ್ಷ ಕೋಟಿ ರೂಗಳ ಕೊರತೆಯಾಗಿದ್ದು, ಆ ಹಣವನ್ನು ರಾಜ್ಯಗಳು ಆರ್ಬಿಐನಿಂದ ಸಾಲದ ರೂಪದಲ್ಲಿ ಪಡೆದುಕೊಳ್ಳಲು ಹೇಳಿದೆ. ಹಾಗಾಗಿ ಕೇಂದ್ರ ಸರ್ಕಾರ ಜಿಎಸ್ಟಿ ವಿಚಾರದಲ್ಲಿ ರಾಜ್ಯಕ್ಕೆ ದ್ರೋಹ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿದ್ದಾರೆ.
ಜಿಎಸ್ಟಿ ನಷ್ಟಕ್ಕೆ ದೇವರ ಆಟ ಎಂದು ಹೇಳಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಿಎಸ್ಟಿ ಹಣವನ್ನು ರಾಜ್ಯಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇದು ರಾಜ್ಯ ಮತ್ತು ಕೇಂದ್ರದ ನಡುವಿನ ಸಂಬಂಧವನ್ನು ಮತ್ತಷ್ಟು ಕೆಡಿಸುತ್ತದೆ. ಹಾಗಾಗಿ ಕೇಂದ್ರ ಸರ್ಕಾರದ ನಿಲುವು ಸರಿಯಾದುದ್ದಲ್ಲ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರವನ್ನು ಕೇಂದ್ರ ಸರ್ಕಾರವೇ ನೀಡಬೇಕು ಎಂದು ದೇವೇಗೌಡರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಜಿಎಸ್ಟಿ ಜಾರಿಗೋಸ್ಕರ ರಾಜ್ಯ ಸರ್ಕಾರಗಳು ತೆರಿಗೆ ಹಣವನ್ನು ಕಳೆದುಕೊಂಡಿವೆ. ಹೀಗಿರುವಾಗ ರಾಜ್ಯಗಳಿಗೆ ಆರ್ಥಿಕ ನೆರವು ನೀಡಬೇಕಿರುವ ಕೇಂದ್ರ ಸರ್ಕಾರ ಜಿಎಸ್ಟಿ ಹಣವನ್ನು ಆರ್ಬಿಐನಿಂದ ಸಾಲದ ರೂಪದಲ್ಲಿ ಪಡೆದುಕೊಳ್ಳಿ ಎಂದು ಹೇಳುತ್ತಿರುವುದು ನ್ಯಾಯವಲ್ಲ. ಕೇಂದ್ರ ನೀಡಿದ್ದ ಭರವಸೆಯನ್ನು ನಂಬಿದ್ದ ರಾಜ್ಯಗಳಿಗೆ ಈಗ ಮೋಸ ಮಾಡುತ್ತಿದೆ. ಕೇಂದ್ರವೇ ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ಹಣ ನೀಡಿಬೇಕು ಎಂದು ಹೆಚ್ಡಿಡಿ ಒತ್ತಾಯಿಸಿದ್ದಾರೆ.
“ಜಿಎಸ್ಟಿ ಜೊತೆಗೆ ತೆರಿಗೆ ಹಂಚಿಕೆ ವಿಚಾರದಲ್ಲೂ ರಾಜ್ಯ ಸರ್ಕಾರಗಳಿಗೆ ಅಸಮಾಧಾನ ಇದೆ. ಪ್ರಗತಿಪರ ರಾಜ್ಯಗಳು ತಮ್ಮಿಂದ ಹೆಚ್ಚು ಕೇಂದ್ರ ತೆರಿಗೆ ಸಂಗ್ರಹವಾಗುತ್ತದೆಯಾದರೂ ಹಂಚಿಕೆಯಲ್ಲಿ ತಮಗೆ ಕಡಿಮೆ ಮೊತ್ತ ಸಿಗುತ್ತದೆ ಎಂದು ಆರೋಪಿಸುತ್ತಿವೆ. ಸಹಕಾರ ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ರಾಜ್ಯಗಳ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡು ಕಠಿಣ ವಿಚಾರಗಳಲ್ಲಿ ಸಹಮತ ಮೂಡಿಸಬೇಕು” ಎಂದು ದೇವೇಗೌಡ ಹೇಳಿದ್ದಾರೆ.
Read Also: ಹಿಂದುಳಿದ ವರ್ಗದವರೇ ಆಗಿರುವ ಪ್ರಧಾನಿ ಮೋದಿಯವರು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸಿ; ಒಳ ಮೀಸಲಾತಿ ಜಾರಿಮಾಡಿ!