ಎಟೆಲಾ ರಾಜೇಂದರ್ ಆಪ್ತ ಬಿಜೆಪಿ ಸೇರಲು ನಕಾರ; ಎಂದಿಗೂ BJP ಸೇರಲ್ಲ ಎಂದ ಸಮ್ಮಿ ರೆಡ್ಡಿ!
ತೆಲಂಗಾಣ ಮಾಜಿ ಸಚಿವ ಎಟೆಲಾ ರಾಜೇಂದರ್ ಅವರ ಆಪ್ತ ಸಹವರ್ತಿ, ಜಮ್ಮಿಕುಂಟಾ ಕೃಷಿ ಮಾರುಕಟ್ಟೆ ಸಮಿತಿತ ಮಾಜಿ ಅಧ್ಯಕ್ಷ ತುಮ್ಮೆತಿ ಸಮ್ಮಿ ರೆಡ್ಡಿ ಅವರು ಬಿಜೆಪಿಗೆ ಸೇರಲು ನಿರಾಕಸಿದ್ದಾರೆ. ತಾವು ಎಂದಿಗೂ ಟಿಆರ್ಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ, ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಸಮ್ಮಿ ರೆಡ್ಡಿ ಹೇಳಿದ್ದಾರೆ. ಇದು ಎಟೆಲಾ ರಾಜೇಂದರ್ಗೆ ಆಘಾತವನ್ನು ತಂದೊಡ್ಡಿದೆ ಎಂದು ಹೇಳಲಾಗಿದೆ.
ಜಮ್ಮಿಕುಂಟಾದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿರುವ ಸಮ್ಮಿ ರೆಡ್ಡಿ, ತಾವು ಮತ್ತು ತಮ್ಮ ಬೆಂಬಲಿಗರು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಅಲ್ಲದೆ, ರಾಜೇಂದರ್ ಅವರೊಂದಿಗೆ ಮೊದಲಿನ ರೀತಿಯಲ್ಲಿ ಜೊತೆಗಿರಲು ಸಾಧ್ಯವಿಲ್ಲ. ಹೀಗಾಗಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ರಾಜೇಂದರ್ ಅವರನ್ನು ತೆಲಂಗಾಣ ಕ್ಯಾಬಿನೆಟ್ನಿಂದ ವಜಾಗೊಳಿಸಲಾಗಿತ್ತು. ಆದರೂ, ನಾನು ಅವರ ಜೊತೆಗಿದ್ದೆ. ಅವರು ತಮ್ಮಲ್ಲಿ ದೋಷಗಳನ್ನು ಸರಿಪಡಿಸಿಕೊಂಡು ಪಕ್ಷದಲ್ಲಿ ಮುಂದುವರೆಯುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅವರು ಟಿಆರ್ಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಹೀಗಾಗಿ ಅವರ ಜೊತೆಗಿರುವ ಅಗತ್ಯವಿಲ್ಲ. ಅವರಿಂದ ದೂರ ಉಳಿದಿದ್ದೇನೆ ಎಂದು ಸಮ್ಮಿ ರೆಡ್ಡಿ ಹೇಳಿದ್ದಾರೆ.
ರಾಜೇಂದರ್ ಅವರು ಮಂತ್ರಿಯಾಗಿ ತಮ್ಮ ಹುದ್ದೆಯನ್ನು ಆನಂದಿಸುತ್ತಿರುವಾಗಲೂ ಸರ್ಕಾರದ ಯೋಜನೆಗಳ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಅವರು ಮುಖ್ಯಮಂತ್ರಿಯಾಗಲು ಬಯಸಿದ್ದರು. ಅವರ ವರ್ತನೆಯೂ ಹಾಗೆಯೇ ಇತ್ತು ಎಂದು ಅವರು ಆರೋಪಿಸಿದ್ದಾರೆ.
“ ನಾನು ಅವರ ಆಪ್ತರಾಗಿದ್ದರಿಂದ ಅವರು ಬಿಜೆಪಿಗೆ ಸೇರಿದ ಕ್ರಮವನ್ನು ವಿರೋಧಿಸಿದ್ದೇನೆ. ಆದರೆ, ಅವರು ತನ್ನ ಆಸ್ತಿಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಸೇರಿದ್ದಾರೆ” ಎಂದು ಸಮ್ಮಿ ರೆಡ್ಡಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಭೂಕಬಳಿಕೆ ಆರೋಪ: ತೆಲಂಗಾಣ ಸಚಿವ ಸಂಪುಟದಿಂದ ಆರೋಗ್ಯ ಸಚಿವ ಎಟೆಲಾ ರಾಜೇಂದರ್ಗೆ ಗೇಟ್ ಪಾಸ್!