ಯಾವ ಪಕ್ಷಕ್ಕೂ ಸೇರುವುದಿಲ್ಲ; ವೈದ್ಯನಾಗಿಯೇ ಸೇವೆ ಮಾಡುತ್ತೇನೆ: ಡಾ. ಕಫೀಲ್ ಖಾನ್
ರಾಷ್ಟ್ರೀಯ ಭದ್ರತಾ ಕಾಯಿದೆಯಡಿ (ಎನ್ಎಸ್ಎ) ಬಂಧನದಲ್ಲಿದ್ದು, ಇತ್ತೀಚೆಗೆ ಬಿಡುಗಡೆಯಾದ ವೈದ್ಯ ಕಫೀಲ್ ಖಾನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಉಹಾಪೋಹ ಹಬ್ಬಿತ್ತು. ಇಂತಹ ಗಾಳಿ ಸುದ್ದಿಗೆ ತೆರೆಎಳೆದಿರುವ ಕಫೀಲ್ ಖಾನ್ ಅವರು ತಾವು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ನಾನು ವೈದ್ಯ, ವೈದ್ಯಾನಾಗಿಯೇ ಇರಲು ಬಯಸುತ್ತೇನೆ ಎಂದಿದ್ದಾರೆ.
ಡಾ.ಕಫೀಲ್ ಖಾನ್ರವರ ಭಾಷಣವು ಹಿಂಸೆಗೆ ಅನುವು ಮಾಡಿಕೊಡುವ ಅಥವಾ ಪ್ರಚೋದನಾಕಾರಿಯಾಗಿಲ್ಲ. ಅವರ ಮೇಲೆ ಎನ್ಎಸ್ಎ ಪ್ರಕರಣ ಹಾಕಿರುವುದು ಕಾನೂನುಬಾಹಿರ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಮತ್ತು ಅವರ ಮೇಲಿನ NSA ಪ್ರಕರಣ ಕೈಬಿಡುವಂತೆ ಆದೇಶಿಸಿತ್ತು. ನಂತರ ಅವರನ್ನು ಮಥುರಾ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಪ್ರಸ್ತುತ ರಾಜಸ್ತಾನದಲ್ಲಿರುವ ಡಾ. ಖಾನ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಪಿಟಿಐ ತಿಳಿಸಿದೆ. “ನಾನು ವೈದ್ಯನಾಗಿದ್ದೇನೆ ಮತ್ತು ಅದೇ ರೀತಿ ಇರಲು ಬಯಸುತ್ತೇನೆ” ಎಂದ ಕಫೀಲ್ ಖಾನ್ ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಹಾಯ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
“ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಮತ್ತು ಮಥುರಾದಿಂದ ಭರತ್ಪುರಕ್ಕೆ ಇರುವ ದೂರ ಕೇವಲ 20 ನಿಮಿಷಗಳಾದ್ದರಿಂದ, ಪ್ರಿಯಾಂಕಾ ಗಾಂಧಿ ನನಗೆ ಭರತ್ಪುರಕ್ಕೆ ಬರಲು ಹೇಳಿದ್ದರು. ಪ್ರಿಯಾಂಕಾ ಗಾಂಧಿಯವರೊಂದಿಗೆ ರಾಜಕೀಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಮತ್ತು ಕಾಂಗ್ರೆಸ್ ಮುಖಂಡರಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಡಾ. ಕಫೀಲ್ ಖಾನ್ ತಿಳಿಸಿದ್ದಾರೆ.
ಸೆ.1 ರಂದು ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ ಅವರ ಬಿಡುಗಡೆ ವಿಳಂಬವಾದಾಗ, ಉತ್ತರಪ್ರದೇಶ ಸರ್ಕಾರವು ಮತ್ತೆ ಒಂದು ಪ್ರಕರಣದಲ್ಲಿ ಸಿಲುಕಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಆತಂಕವಿತ್ತು ಎಂದು ಅವರು ಹೇಳಿದರು.
Read Also: ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’
ಆ ಆತಂದದಲ್ಲಿದ್ದಾಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾನವೀಯ ನೆಲೆಯಲ್ಲಿ ನನಗೆ ಸಹಾಯ ಮಾಡಿದ್ದಾರೆ. ಆದರೆ ಅದನ್ನು ಕಾಂಗ್ರೆಸ್ ಸೇರಲು ಹೊರಟ್ಟಿದ್ದಾರೆ ಎಂದು ನಿರ್ಣಯಿಸಬಾರದು ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಡಾ. ಕಫೀಲ್ ಖಾನ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಗೋರಖ್ಪುರದ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಹುದ್ದೆಗೆ ಪುನಃ ನೇಮಕ ಮಾಡುವಂತೆ, ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಗೋರಖ್ಪುರದ ಬಿಆರ್ಡಿ ವೈದ್ಯಕೀಯ ಕಾಲೇಜಿನಲ್ಲಿ ಶಿಶುವೈದ್ಯರಾಗಿ ಕೆಲಸ ಮಾಡುತ್ತಿದ್ದ ಡಾ. ಖಾನ್ 2017 ರಲ್ಲಿ ಆಮ್ಲಜನಕ ಸಿಲಿಂಡರ್ಗಳ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಹಲವಾರು ಮಕ್ಕಳು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು.
ಆರಂಭದಲ್ಲಿ, ತುರ್ತು ಆಮ್ಲಜನಕ ಸಿಲಿಂಡರ್ಗಳನ್ನು ಜೋಡಿಸಿದ್ದಕ್ಕಾಗಿ ಅವರನ್ನು ಮಕ್ಕಳ ರಕ್ಷಕ ಎಂದು ಕರೆಯಲಾಯಿತು. ಆದರೆ ನಂತರ ಯೋಗಿ ಸರ್ಕಾರ ಇವರ ಜೊತೆಗೆ ಆಸ್ಪತ್ರೆಯ ಇತರ ಒಂಬತ್ತು ವೈದ್ಯರು ಮತ್ತು ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಾಯಿತು. ಇವರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾದರು.
ಆದರೆ ಜನವರಿ 2020ಯಲ್ಲಿ ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆ (ಸಿಎಎ) ಪ್ರತಿಭಟನೆಯ ಸಂದರ್ಭದಲ್ಲಿ ಎಎಂಯುನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಖಾನ್ ಅವರನ್ನು ಮತ್ತೆ ಬಂಧಿಸಲಾಯಿತು. ಆದರೆ ಆರೋಪ ಸಾಬೀತಾಗದೆ ಸೆ.1ರಂದು ಅಲಹಾಬಾದ್ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ ನಂತರ, ಅವರು ಮಥುರಾ ಜೈಲಿನಿಂದ ತಡರಾತ್ರಿ ಹೊರನಡೆದರು.
ಸದ್ಯ ವೈದ್ಯ ಕಫೀಲ್ ಖಾನ್ ರಾಜಕೀಯಕ್ಕೆ ಬರುವ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ. ವೈದ್ಯರಾಗಿಯೇ ಮುಂದುವರೆದು ಜನ ಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಿಂದಿ ಥೆರಿಯತು ಪೊಡಾ: ಹಿಂದಿ ಹೇರಿಕೆಯ ವಿರುದ್ಧ ಟೀ-ಶರ್ಟ್ ಟ್ರೆಂಡಿಂಗ್!