ಹೆರಿಗೆಗೂ ಲಂಚ ಕೇಳುತ್ತಿರುವ ವೈದ್ಯರು; ಹುಟ್ಟುವ ಮುನ್ನವೇ ಮಗು ಸಾವು!
ವೈದ್ಯಕೀಯ ಎಂಬುದು ಸುಲಿಗೆಯ ದಂದೆಯಾಗಿ ಎಷ್ಟೋ ವರ್ಷಗಳೇ ಕಳೆದಿವೆ. ಆಸ್ಪತ್ರೆಗೆ ಹೋದರೆ, ಜೀವವೂ ಉಳಿಯುವುದಿಲ್ಲ. ಆಸ್ತಿಯೂ ಉಳಿಯುವುದಿಲ್ಲ ಎಂಬ ಬಡವರ ಗೋಳಿಗೆ ಖಾಸಗೀ ಆಸ್ಪತ್ರೆಗಳು ಸಾಕ್ಷಿಯಾಗಿದ್ದವು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಆ ಸಾಲಿಗೆ ಸರ್ಕಾರಿ ಆಸ್ಪತ್ರೆಗಳ ವೈದ್ಯರೂ ಸೇರುತ್ತಿದ್ದಾರೆ. ಹೆರಿಗೆಗೂ ಲಂಚ ಕೇಳುತ್ತಿರುವ ಆರೋಪಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತವರು ಕ್ಷೇತ್ರ ಅಥಣಿಯ ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಹುಲಗಬಾಳ ಗ್ರಾಮದ ಮಹಿಳೆಯೊಬ್ಬರು ಹೆರಿಗೆಗೆ ಬಂದ ವೇಳೆ ನಾರ್ಮಲ್ ಡೆಲಿವರಿ ಆಗುತ್ತೆ ಅಂದಿದ್ದ ಸಿಬ್ಬಂದಿ ನಂತರದಲ್ಲಿ ಸೀಜರ್ ಮಾಡಲು ಮುಂದಾಗಿದ್ರು. ಆದ್ರೆ ಕರ್ತವ್ಯ ನಿರತ ವೈದ್ಯರು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಮೊದಲಿಗೆ ನಾರ್ಮಲ್ ಡೆಲಿವರಿ ಮಾಡಲು ಯತ್ನಿಸಿದ್ದ ಸಿಬ್ಬಂಗಳು ಬಳಿಕ ತಜ್ಞ ವೈದರಿಗೆ ನಾರ್ಮಲ್ ಡೆಲಿವರಿ ಆಗದ ಕುರಿತು ಮಾಹಿತಿ ನೀಡಿದ್ರು ಆದ್ರೆ ವೈದ್ಯರು ಮಾತ್ರ ಸಮಯಕ್ಕೆ ಸರಿಯಾಗಿ ಬಾರದ ಹಿನ್ನಲೆ ಮಗು ಹುಟ್ಟುವ ಮುನ್ನವೆ ಡೆಲಿವರಿ ಸಮಯದಲ್ಲೆ ಅಸುನೀಗಿದೆ.
ಅಥಣಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಣ ನೀಡದಿದ್ದರೆ ಹೆರಿಗೆ ಮಾಡಿಸುವುದಿಲ್ಲ. ಸಾಮಾfಯ ಹೆರಿಗೆಯಾದರೆ 2000 ದಿಂದ 3,000 ಲಂಚ ನೀಡಬೇಕು. ಸಿಜೇರಿಯನ್ ಆದರೆ 8,000 ದಿಂದ 10,000 ಕೊಡಬೇಕು. ಇಲ್ಲವಾದರೆ ಹೆರಿಗೆಯನ್ನೇ ಮಾಡಿಸುವುದಿಲ್ಲ. ನಮ್ಮ ಬಳಿ ಸರಿಯಾದ ವ್ಯವಸ್ಥೆ ಇಲ್ಲಾ. ಬಿಪಿ ಜಾಸ್ತಿ ಆಗಿದೆ ಅರವಳಿಕೆ ವೈದ್ಯರು ಇಲ್ಲಾ ಎಂಬ ಇತ್ಯಾದಿ ಕುಂಟು ನೆಪಗಳನ್ನು ಹೇಳಿ ಖಾಸಗಿ ಆಸ್ಪತ್ರೆಗೆ ಹೋಗಿ ಅಥವಾ ಜಿಲ್ಲಾ ಆಸ್ಪತ್ರೆ ಹೋಗಿ ಎಂದು ಹೇಳುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಮಾಡಿಸಬೇಕು ಎಂದರೆ 45,000 ಪಾವತಿಸಬೇಕು. ಹಾಗಾಗಿ ಅನಿವಾರ್ಯವಾಗಿ ಹಣ ಕೊಟ್ಟು ಇಲ್ಲಿಯೇ ಹೆರಿಗೆ ಮಾಡಿಸಬೇಕು ಎಂದು ಅಲ್ಲಿಯ ಜನರು ಆರೋಪಿಸಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳು ಅಥಣಿ ಆಸ್ಪತ್ರೆಯಲ್ಲಿದ್ದರೂ ಸಹ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಆರಾಮಾಗಿದ್ದಾರೆ. ಸಿಬ್ಬಂದಿಗಳು ಬೇಕಾಬಿಟ್ಟು ರಜೆ ತೆಗೆದುಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆದರೂ ಯಾವುದೇ ಕ್ರಮ ಕೈಗೊಳ್ಳದ ವೈದ್ಯಾಧಿಕಾರಿಗಳು ಮತ್ತು ಅಥಣಿ ತಾಲ್ಲೂಕು ಆಸ್ಪತ್ರೆ ಆಡಳಿತ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಅಂತರ್ಧರ್ಮೀಯ ವಿವಾಹಗಳನ್ನು ವಿರೋಧಿಸುವುದಿಲ್ಲ: ರತನ್ ಶಾರದಾ