ಭಾರತವನ್ನು ಮತ್ತೊಂದು ತಾಲಿಬಾನ್ ದೇಶವಾಗಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ
ಬಿಜೆಪಿಯು ವಿಭಜಿಸಿ ಆಳುವ ರಾಜಕಾರಣ ಮಾಡುತ್ತಿದೆ. ಭಾರತವನ್ನು ಪಾಕಿಸ್ತಾನ ಅಥವಾ ತಾಲಿಬಾನ್ ಆಗಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿ ಗೆಲುವು ಸಾಧಿಸಿದರೆ ಭವಾನಿಪುರ ಕ್ಷೇತ್ರವು ಪಾಕಿಸ್ತಾನ ಆಗಲಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, ಬಿಜೆಪಿಯು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ರಾಜಕೀಯವನ್ನು ಮಾಡುತ್ತಿದೆ. ನಂದಿಗ್ರಾಮದಲ್ಲೂ ಟಿಎಂಸಿ ಗೆದ್ದರೆ ಪಾಕಿಸ್ತಾನ ಆಗಲಿದೆ ಎಂದಿದ್ದರು. ಭವಾನಿಪುರದಲ್ಲೂ ಅದನ್ನೇ ಹೇಳುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ನನ್ನ ದೇಶವು ಬಲಶಾಲಿಯಾಗಬೇಕು. ಅದಕ್ಕಾಗಿ ನನ್ನೆಲ್ಲ ಶಕ್ತಿಯಿಂದ ತಾಯ್ನಾಡನ್ನು ರಕ್ಷಿಸುವ ಪ್ರಯತ್ನ ಮಾಡುತ್ತೇನೆ. ಭಾರತವನ್ನು ಮತ್ತೊಂದು ತಾಲಿಬಾನ್ ಆಳುವ ದೇಶವಾಗಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಾನು ಮಸೀದಿಗೆ ಭೇಟಿ ನೀಡಿದ್ದೇನೆ. ಗುರುದ್ವಾರಕ್ಕೂ ಹೋಗಿದ್ದೇನೆ. ಎರಡರಲ್ಲೂ ಬಿಜೆಪಿಗೆ ಸಮಸ್ಯೆಯಿದೆ. ನಾವು ಧರ್ಮವನ್ನು ರಾಜಕೀಯಕ್ಕೆ ಎಳೆಯಲು ಬಯಸುವುದಿಲ್ಲ. ಆದರೆ ಬಿಜೆಪಿ ಸಮುದಾಯಗಳ ನಡುವಿನ ಸಾಮರಸ್ಯ, ಸಹೋದರತ್ವ ಮತ್ತು ಸಾಮಾಜಿಕ ರಚನೆಯನ್ನು ನಾಶಪಡಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಹೋರಾಟಗಾರರ ಮೇಲಿನ 5,570 ಪ್ರಕರಣಗಳನ್ನು ವಾಪಸ್ ಪಡೆದ ತಮಿಳುನಾಡು ಸರ್ಕಾರ!