‘ಪ್ರಜಾಪ್ರಭುತ್ವ ಎಂದರೆ ಅಲ್ಪಸಂಖ್ಯಾತರ ರಕ್ಷಣೆ’: ಹರಿದ್ವಾರದಲ್ಲಿ ಕಸಾಯಿಖಾನೆಗಳ ನಿಷೇಧ ಪ್ರಕರಣದಲ್ಲಿ ಹೈಕೋರ್ಟ್
ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಕಸಾಯಿಖಾನೆಗಳನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿರುವ ಉತ್ತರಾಖಂಡ ಹೈಕೋರ್ಟ್, ಪ್ರಜಾಪ್ರಭುತ್ವ ಎಂದರೆ ಅಲ್ಪಸಂಖ್ಯಾತರನ್ನು ರಕ್ಷಿಸುವುದೂ ಆಗಿದೆ ಎಂದು ಹೇಳಿದೆ.
ಹರಿದ್ವಾರ ಜಿಲ್ಲೆಯಲ್ಲಿ ಕಸಾಯಿಖಾನೆಗಳ ನಿಷೇಧವನ್ನು ಪ್ರಶ್ನಿಸಿ ಮಂಗಳವಾರ ಮಂಗ್ಲೌರ್ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹಾನ್ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ವರ್ಮಾ ಅವರ ಹೈಕೋರ್ಟ್ನ ವಿಭಾಗೀಯ ಪೀಠ, “ಪ್ರಜಾಪ್ರಭುತ್ವ ಎಂದರೆ ಅಲ್ಪಸಂಖ್ಯಾತರ ರಕ್ಷಣೆ” ಎಂದು ಹೇಳಿದೆ.
ಕಸಾಯಿಖಾನೆಗಳ ನಿಷೇಧವು ಗೌಪ್ಯತೆ ಹಕ್ಕು, ಜೀವನ ಹಕ್ಕು ಮತ್ತು ಮುಕ್ತವಾಗಿ ಧರ್ಮವನ್ನು ಆಚರಿಸುವ ಹಕ್ಕಿಗೆ ವಿರುದ್ಧವಾಗಿದೆ. ಮಾಂಗ್ಲೌರ್ ನಂತಹ ಪಟ್ಟಣಗಳಲ್ಲಿ ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿವೆ. ಹೀಗಿರುವಾಗ ಈ ನಿಷೇಧವು ಹರಿದ್ವಾರದಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“ಹರಿದ್ವಾರ ಜಿಲ್ಲೆಯ ಜನರಿಗೆ ಧರ್ಮ ಮತ್ತು ಜಾತಿಯ ಮಿತಿಗಳನ್ನು ಮೀರಿ ಆರೋಗ್ಯಕರ ಮತ್ತು ತಾಜಾ ಮಾಂಸಾಹಾರಿ ಆಹಾರವನ್ನು ನಿರಾಕರಿಸುವುದು ತಾರತಮ್ಯಕ್ಕೆ ಕಾರಣವಾಗಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ವರ್ಷದ ಮಾರ್ಚ್ನಲ್ಲಿ ರಾಜ್ಯ ಸರ್ಕಾರವು ಹರಿದ್ವಾರದ ಎಲ್ಲಾ ಪ್ರದೇಶಗಳನ್ನು “ಕಸಾಯಿಖಾನೆಗಳನ್ನು ನಿಷೇಧಿಸಿ”ದ್ದು, ಅವುಗಳಿಗೆ ನೀಡಲಾಗಿದ್ದ ಎನ್ಒಸಿಗಳನ್ನು ರದ್ದುಗೊಳಿಸಿದೆ.
ರಾಜ್ಯ ಸರ್ಕಾರದ ಈ ನಡೆ “ಅನಿಯಂತ್ರಿತ ಮತ್ತು ಅಸಂವಿಧಾನಿಕ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಯಾವುದೇ ರೀತಿಯ ಮಾಂಸದ ಮೇಲಿನ ನಿಷೇಧವು ಅಸಂವಿಧಾನಿಕವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದಾಗಿದೆ.
ಅರ್ಜಿಯು “ಗಂಭೀರ ಮೂಲಭೂತ ಪ್ರಶ್ನೆಗಳನ್ನು” ಎತ್ತಿದೆ ಮತ್ತು ಸಾಂವಿಧಾನಿಕ ವ್ಯಾಖ್ಯಾನವನ್ನು ಒಳಗೊಂಡಿದೆ ಎಂದು ನ್ಯಾಯಾಲಯ ಹೇಳಿದೆ.
ಈ ಹಿಂದೆ, ಇದೇ ರೀತಿಯ ವಿಚಾರಣೆಯೊಂದರಲ್ಲಿ ಸುಪ್ರೀಂ ಕೋರ್ಟ್, “ಮಾಂಸಾಹಾರ ಸೇವನೆಯನ್ನು ಯಾರೊಬ್ಬರ ಗಂಟಲಿನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾಳೆ, ಯಾರೂ ಮಾಂಸವನ್ನು ತಿನ್ನವಾರದು ಎಂದು ನೀವು ಹೇಳಿತ್ತೀರಿ” ಎಂದು ಕಳವಳ ವ್ಯಕ್ತಪಡಿಸಿತ್ತು.
ಇದನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್, “ಒಬ್ಬ ನಾಗರಿಕನಿಗೆ ತನ್ನದೇ ಆದ ಆಹಾರವನ್ನು ನಿರ್ಧರಿಸುವ ಹಕ್ಕು ಇದೆಯೇ ಅಥವಾ ಅದನ್ನು ಸರ್ಕಾರ ನಿರ್ಧರಿಸುತ್ತದೆಯೇ” ಎಂದು ಪ್ರಶ್ನಿಸಿದೆ.
ಅಲ್ಲದೆ, ವಿಚಾರಣೆಯನ್ನು ಮುಂದೂಡಿರುವ ಹೈಕೋರ್ಟ್, ‘ಜುಲೈ 21 ರಂದು ಬರುವ ಬಕ್ರಿದ್ ಸಮಯಕ್ಕೆ ಸರಿಯಾಗಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದು, ಮುಂದಿನ ವಿಚಾರಣೆ ಜುಲೈ 23 ರಂದು ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 36 ವರ್ಷ; ಮನುವಾದಿಗಳ ಅಟ್ಟಹಾಸಕ್ಕೆ ಬೀಳದ ಕಡಿವಾಣ!