ಬ್ಯಾಂಕ್ ಸಿಬ್ಬಂದಿ ಯಡವಟ್ಟು; ಪಾಲಿಕೆ ಸದಸ್ಯರಿಗೆ ಸಿಕ್ಕಿತು ಲಕ್ಷ ಲಕ್ಷ ಹಣ!
ಬ್ಯಾಂಕ್ ಸಿಬ್ಬಂದಿಯ ಎಸಗಿದ ಒಂದು ಯಡವಟ್ಟಿನಿಂದಾಗಿ ಪಾಲಿಕೆ ಮೇಯರ್, ಉಪಮೇಯರ್ ಸೇರಿದಂತೆ 50 ಸದಸ್ಯರ ಖಾತೆಗೆ ಸುಮಾರು 3 ಕೋಟಿ 20ರೂ ಸಂದಾಯವಾಗಿರುವ ಸಂಗತಿ ದಾವಣಗೆರೆಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಸರ್ಕಾರದಿಂದ ಬರುವ ಸಹಾಯಧನದ ಹಣದಲ್ಲಿ ಮೇಯರ್ಗೆ 16 ಸಾವಿರ, ಉಪಮೇಯರ್ಗೆ 10 ಸಾವಿರ ಹಾಗೂ ಪಾಲಿಕೆಯ ನಾಮನಿರ್ದೇಶಿತರೂ ಸೇರಿದಂತೆ ಇತರೆ ಸದಸ್ಯರಿಗೆ 6 ಸಾವಿರ ರೂಪಾಯಿ ಜಮಾ ಆಗಬೇಕಿತ್ತು. ಆದರೆ ಬ್ಯಾಂಕ್ ಸಿಬ್ಬಂದಿ ಎಸಗಿದ ಪ್ರಮಾದದಿಂದ ಕಳೆದ ತಿಂಗಳ 28ನೇ ತಾರೀಕಿನಂದು ಸುಮಾರು 3 ಕೋಟಿ 20 ಲಕ್ಷ ರೂಪಾಯಿ ಹಣ ಜಮೆಯಾಗಿದ್ದು ತಡವಾಗಿ ಗೊತ್ತಾಗಿದೆ.
ಮೇಯರ್ಗೆ 16 ಲಕ್ಷ, ಉಪ ಮೇಯರ್ಗೆ 10 ಲಕ್ಷ, ಪಾಲಿಕೆಯ 48 ಸದಸ್ಯರಿಗೆ ಒಟ್ಟು 6 ಲಕ್ಷ ರೂಪಾಯಿ ಜಮಾ ಆಗಿದೆ.
ಕೆಲವೊಬ್ಬರ ಲೋನ್ ಹಣ ಕಟ್ ಆಗಿದ್ದರೆ, ಮತ್ತೆ ಕೆಲವರು ನೋಡಿಕೊಂಡಿಯೇ ಇಲ್ಲ. ಬ್ಯಾಂಕ್ ಸಿಬ್ಬಂದಿಗೆ ಇದು ಗೊತ್ತಾಗುತ್ತಿದ್ದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಎಲ್ಲರಿಗೂ ಕರೆ ಮಾಡಿ ಆಗಿರುವ ಪ್ರಮಾದದ ಬಗ್ಗೆ ಮಾಹಿತಿ ನೀಡಿದ್ದಾರೆ. ಹಣ ವಾಪಸ್ ಪಡೆದಿರುವುದಾಗಿ ಮೇಯರ್ ಎಸ್. ಟಿ. ವೀರೇಶ್ ತಿಳಿಸಿದ್ದಾರೆ.
ಇನ್ನು ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಶಿವನಗೌಡ ಮಾತನಾಡಿ, ಆರು ಲಕ್ಷ ರೂಪಾಯಿ ನನಗೆ ಬಂದಿತ್ತು. ಸುಮಾರು 50 ಜನರಿಗೂ ಬಂದಿದೆ. ಗೌರವಧನದ ಬದಲಾಗಿ ತಾಂತ್ರಿಕ ದೋಷದಿಂದ ಈ ರೀತಿಯಾಗಿದೆ. ಪಾಲಿಕೆಯ ಲೆಕ್ಕಾಧಿಕಾರಿ ಕರೆ ಮಾಡಿ ಹಣ ಪ್ರಮಾದದಿಂದ ಬಂದಿದೆ. ಇದನ್ನು ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದರು ಎಂದು ತಿಳಿಸಿದರು.