ಪ್ರಧಾನಿ ಮೋದಿ, ಅಂಬಾನಿ, ಅದಾನಿ ಪ್ರತಿಮೆಗಳನ್ನು ಸುಟ್ಟು ರೈತರಿಂದ ದಸರಾ ಆಚರಣೆ!
ರೈತ ವಿರೋಧಿ ಕೃಷಿ ಕಾನೂನುಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ-ಕಾರ್ಮಿಕರು ಪ್ರಧಾನಿ ಮೋದಿ, ಅನಿಲ್ ಅಂಬಾನಿ ಮತ್ತು ಅದಾನಿಯ ಪ್ರತಿಮೆಗಳನ್ನು ಸುಟ್ಟು ಪಂಜಾಬ್ನಲ್ಲಿ ದಸರಾ ಆಚರಿಸಿದ್ದಾರೆ.
ಪಂಜಾಬ್ನ 800ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇಂದು ಈ ರೀಯಾಗಿ ಪ್ರತಿಭಟನೆ ನಡೆಸಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಲಾಗಿದೆ. ಪ್ರತಿಭಟನೆಯಲ್ಲಿ ರೈತರು, ರೈತ ಸಂಘಟನೆಗಳು ಕಾರ್ಮಿಕರು, ಹೋರಾಟಗಾಗರು ಭಾಗವಹಿಸಿದ್ದಾರೆ.
ರೈತ-ಮಜ್ದೂರ್ ಸಂಘರ್ಷ ಸಮಿತಿಯ ಅಧಿಕಾರಿಗಳಾದ ಇಂದ್ರಜಿತ್ ಸಿಂಗ್ ಬಾತ್, ಧರಂ ಸಿಂಗ್ ಸಿಧು, ಬಲ್ಜಿಂದರ್ ಸಿಂಗ್ ಮತ್ತು ನರಿಂದರ್ ಪಾಲ್ ಸಿಂಗ್ ಜಟ್ಲಾ ಅವರು, ಫಿರೋಜ್ಪುರದ ವಿವಿಧ ಹಳ್ಳಿಗಳಲ್ಲಿನ ರೈತ-ಕಾರ್ಮಿಕರು ಪ್ರಧಾನಿ ಮೋದಿ, ಅಂಬಾನಿ ಮತ್ತು ಅದಾನಿ ಬಗ್ಗೆ ತಿಳಿದುಕೊಂಡಿದ್ದಾರೆ ಎಂದು ಹೇಳಿದರು.
ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ, ಅಂಬಾನಿ ಮತ್ತು ಅದಾನಿ ಅವರ ಪ್ರತಿಮೆಗಳನ್ನು ಮಾಡಿ, ಅವುಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತ ವಿರೋಧಿ ಕೃಷಿ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆ -2020 ಅನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನೆಟ್ಟಿಗರು ಕರ್ನಾಟಕದಲ್ಲೂ ಈ ರೀತಿಯ ಪ್ರತಿಭಟನೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಮತ್ತೊಬ್ಬ ಫೇಸ್ಬುಕ್ ಬಳಕೆದಾರರು “ಪಂಜಾಬಿನಲ್ಲಿ ಈ ಬಾರಿ ಅತ್ಯಂತ ವಿಶಿಷ್ಟ ರೀತಿಯ ದಸರಾ ಆಚರಣೆ.!!” ಎಂದು ಶೀರ್ಷಿಕೆ ನೀಡಿ, ಪ್ರತಿಭಟನೆಯ ವಿಡಿಯೋ ಹಂಚಿಕೊಂಡಿದ್ದಾರೆ.
ಕೇಂದ್ರವು ಇತ್ತೀಚೆಗೆ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಸಾಂಕೇತಿಕ ಪ್ರತಿಭಟನೆಯಾಗಿ ದಸರಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು ಸುಡುವುದಾಗಿ ಪಂಜಾಬ್ ಯುವ ಕಾಂಗ್ರೆಸ್ ನಿನ್ನೆ ತಿಳಿಸಿತ್ತು.
ಇದನ್ನೂ ಓದಿ: ತರಗತಿಗೆ ಹಾಜರ್, ಆನ್ಲೈನ್ನಲ್ಲಿ ಲೆಕ್ಚರ್: ಶಿಕ್ಷಕರಿಗೆ ತಲೆನೋವಾದ ಸರ್ಕಾರದ ಆದೇಶ!