ಚಾಮರಾಜನಗರ ಆಕ್ಸಿಜನ್ ದುರಂತ : ತಪ್ಪಿತಸ್ಥರಿಗೆ ಇನ್ನೂ ಯಾಕಿಲ್ಲ ಶಿಕ್ಷೆ? ಸರ್ಕಾರದ ವಿರುದ್ದ ವಾಟಾಳ್ ಪ್ರತಿಭಟನೆ!
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದಾಗಬೇಕು ಮತ್ತು ಕೊರೊನಾ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಏಕಾಂಗಿಯಾಗಿ ಇಂದು ನಗರದ ಹಾರ್ಡಿಂಗ್ ವೃತ್ತದ ಬಳಿ ರಸ್ತೆಯಲ್ಲಿ ಮಲಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಡಿಫರೆಂಟ್ ಪ್ರತಿಭಟನೆ ಮಾಡಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ವಾಟಾಳ್ ನಾಗರಾಜ್ ಕೊರೊನಾದಿಂದ ಜನರ ಜೀವ ಉಳಿಸಿ ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಬಾರದಿರುವ ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದಾಗಬೇಕು ಎಂದರು. ಸರ್ಕಾರ ಕೊರೊನಾ ಬಗ್ಗೆ ಕಠೀಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇನ್ನೂ ಚಾಮರಾಜನಗರ ಆಕ್ಸಿಜನ್ ದುರಂತ ವಿಚಾರಕ್ಕೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ. ಕೊರೊನಾ ನಿಯಂತ್ರಿಸುವಲ್ಲಿ ಯಡಿಯೂರಪ್ಪ ಸರ್ಕಾರ ವಿಫಲವಾಗಿದೆ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಘೋಷಣೆ ಕೂಗಿದ್ದಾರೆ. ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ ಜರುಗಿ ಒಂದು ತಿಂಗಳಾದ್ರೂ ಯಾರಿಗೂ ಶಿಕ್ಷೆಯಾಗಿಲ್ಲ. 24 ಮಂದಿ ಸಾವನ್ನಪ್ಪಿದರೂ ಸಿಎಂ ಬಿಎಸ್ ವೈ ಜಿಲ್ಲೆಗೆ ಭೇಟಿ ನೀಡಲಿಲ್ಲ. ಯಡಿಯೂರಪ್ಪ ಮೌಢ್ಯಕ್ಕೆ ಅಂಟಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ತಪ್ಪಿತಸ್ಥರನ್ನ ವರ್ಗಾವಣೆ ಅಲ್ಲ ಜೈಲಿಗೆ ಕಳುಹಿಸಬೇಕು. ಜಿಲ್ಲಾಡಳಿತ ಬಗ್ಗೆ ಸರ್ಕಾರ ಯಾವ ಕ್ರಮವು ತೆಗೆದುಕೊಂಡಿಲ್ಲ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.