ಇಸ್ಲಾಂ ಮತ್ತು ಅಂಬೇಡ್ಕರ್ ಬಗೆಗೆ ಸೂಲಿಬೆಲೆ ಸುಳ್ಳುಗಳು! ಮಹಾಮಾನವತಾವಾದಿಗೆ ಚಕ್ರವರ್ತಿ ಸೂಲಿಬೆಲೆಯಿಂದ ಅವಮಾನ!

ಇಸ್ಲಾಂ ಕುರಿತು ಅಂಬೇಡ್ಕರ್ ಮನದಿಂಗಿತ ಎಂಬ ವಿಚಾರದ ಬಗ್ಗೆ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿದ್ದಾರೆ. ಮಹಾ ಮಾನವತಾವಾದಿಯಾಗಿದ್ದ ಡಾ ಬಿ ಆರ್ ಆಂಬೇಡ್ಕರ್ ಮುಸ್ಲಿಂ ದ್ವೇಷಿಯಾಗಿದ್ದರು ಎಂದು ಬಿಂಬಿಸಿ ಅಂಬೇಡ್ಕರ್ ಮತ್ತು ಮುಸ್ಲೀಮರನ್ನು ಏಕಕಾಲದಲ್ಲಿ ಅವಮಾನಿಸಲು ಸೂಲಿಬೆಲೆ ಹೆಣಗಾಡಿದ್ದಾರೆ‌. ಅಂಬೇಡ್ಕರ್ ಗೆ ಮಹಾಮಾನವತಾವಾದಿಯ ವ್ಯಕ್ತಿತ್ವವಿದೆ. ಅಂಬೇಡ್ಕರ್ ಘನತೆಯ ಕುಂದು ತರುವ ಸಂಘಪರಿವಾರದ ಹಳೇ ಕುತಂತ್ರವೇ ಸೂಲಿಬೆಲೆಯ ಈ ಪ್ರಯತ್ನವಾಗಿದೆ. ಅದನ್ನು ಹೊರತುಪಡಿಸಿದರೆ ಯಾವುದೇ ಜನಾಂಗ ಅಥವಾ ಸಮುದಾಯವನ್ನು ಪೂರ್ವಾಗ್ರಹ ಪೀಡಿತವಾಗಿ ನೋಡುವ ವ್ಯಕ್ತಿತ್ವ ಅಂಬೇಡ್ಕರರದ್ದಲ್ಲ.

ಆಗಿನ ಕಾಲಘಟ್ಟದಲ್ಲಿ ಅಂಬೇಡ್ಕರ್ ಗೆ ಮುಸ್ಲೀಮರ ನಡವಳಿಕೆ ಬಗ್ಗೆ ಆಕ್ಷೇಪಗಳು ಇದ್ದಿದ್ದು ನಿಜ. ಇಸ್ಲಾಂ ಕೂಡಾ ದಲಿತರ ಬಗೆಗೆ ಅಸ್ಪೃಶ್ಯ ನಿಲುವನ್ನು ಹೊಂದಿತ್ತು. ಹಾಗಾಗಿ ಅಂಬೇಡ್ಕರ್ ಇಸ್ಲಾಂ ವಿರುದ್ದ ಆಕ್ರೋಶಿತರಾಗಿದ್ದರು ಎಂದು ಸೂಲಿಬೆಲೆ ಹೇಳುತ್ತಾರೆ. ಇದು ಬಾಗಶಃ ನಿಜ. ಆದರೆ ಅದಕ್ಕೆ ಕಾರಣ ಇಸ್ಲಾಂ ಧರ್ಮ ಅಲ್ಲ. ಇಸ್ಲಾಂ ಧರ್ಮದ ಮೂಲ ಆಶಯಗಳು ಒಳ್ಳೆಯದಿದ್ದು, ಅದು ಭಾರತದಲ್ಲಿ ಹಿಂದೂ ಸಮಾಜವನ್ನು ಅನುಕರಣೆ ಮಾಡಿ ಕೆಟ್ಟ ದಾರಿ ಹಿಡಿದಿದೆ ಎಂದೇ ಅಂಬೇಡ್ಕರ್ ಭಾವಿಸಿದ್ದರು. ಹಿಂದೂ ಧರ್ಮೀಯ ಮೇಲ್ವರ್ಗಗಳ ಜೊತೆ ಆರ್ಥಿಕ, ಸಾಮಾಜಿಕ, ರಾಜಕೀಯ ಮಿಳಿತವನ್ನು ಹೊಂದಿದ್ದ ಮುಸ್ಲೀಮರು ತಮ್ಮ ಧರ್ಮದಲ್ಲಿ ಇಲ್ಲದ ಅಸ್ಪೃಶ್ಯತೆಯನ್ನು ಹಿಂದೂಗಳಿಂದ ಎರವಲು ಪಡೆದಿದ್ದರು ಎಂದು ಅಂಬೇಡ್ಕರ್ ಗೆ ಅಸಮಾದಾನ ಇತ್ತು. ಇದು ಹಿಂದೂ ಧರ್ಮದ ತಾನೂ ಕೆಟ್ಟಿದ್ದಲ್ಲದೇ ಇಸ್ಲಾಂ ಧರ್ಮವನ್ನೂ ಕೆಡಿಸಿತ್ತು ಎಂಬ ಬಗೆಗಿನ ಅಸಮಾದಾನವಷ್ಟೆ.
“ಮುಸ್ಲೀಮರ ಆಗಿನ ರಾಜಕೀಯದ ಬಗೆಗೆ” ಅಂಬೇಡ್ಕರ್ ಅಸಮಾದಾನಕ್ಕೆ ಇನ್ನೊಂದು ಮುಖ್ಯ ಕಾರಣ ಮನುವಾದಿ ಹಿಂದೂ ನಾಯಕರ ತಾಳಕ್ಕೆ ಕುಣಿಯುತ್ತಿದ್ದ ಮುಸ್ಲಿಂ ನಾಯಕರ ಧೋರಣೆ. ದಲಿತರ ಅಭಿವೃದ್ದಿ ವಿಚಾರವನ್ನು ಅಂಬೇಡ್ಕರ್ ಎತ್ತಿದಾಗ ಹಿಂದೂ ಮನುವಾದಿ ನಾಯಕರು ಮುಸ್ಲಿಂ ನಾಯಕರನ್ನು ಎತ್ತಿಕಟ್ಟುತ್ತಿದ್ದರು.

Read Also: ಭೂಮಾಲೀಕರ ದರ್ಪ, ಭೂ ಹೀನ ದಲಿತರ ದೈನ್ಯತೆ ತೊಲಗಲು ಭೂಮಿ ರಾಷ್ಟ್ರೀಕರಣವಾಗಬೇಕು: ಅಂಬೇಡ್ಕರ್

ಸರಳವಾಗಿ ಹೇಳುವುದಾದರೆ, ತಮ್ಮ ಹಿಂದಿನ ಅಧಿಕಾರವನ್ನು ಪಡೆಯಲು ಮನುವಾದಿ ಹಿಂದೂ ನಾಯಕರು ತಮ್ಮ ಹಿಡನ್ ಅಜೆಂಡಾದ ಭಾಗವಾಗಿ ಮುಸ್ಲಿಮರ ಬೇಡಿಕೆಗಳೆಲ್ಲವಕ್ಕೂ ಒಪ್ಪಿಗೆ ನೀಡುತ್ತಿದ್ದರು. ದಲಿತರು ಹಿಂದೂಗಳಲ್ಲ ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಅದಕ್ಕಾಗಿಯೇ ಹಿಂದೂ ಮತ್ತು ಮುಸ್ಲಿಂ ಎಂದು ಪ್ರತ್ಯೇಕಿಸಲು “ಅವಕಾಶವನ್ನು ಎರಡು ಪಾಲು” ಮಾತ್ರ ಮಾಡಲಾಗುತ್ತಿತ್ತು. ಅವಕಾಶವನ್ನು “ಮೂರು ಪಾಲು ಮಾಡಿ” ಎಂಬುದು ಅಂಬೇಡ್ಕರ್ ಆಗ್ರಹವಾಗಿತ್ತು. ಒಂದೋ ದಲಿತರು ಹಿಂದೂಗಳೆಂದು ಒಪ್ಪಬೇಕಿತ್ತು. ಹಾಗೆ ಒಪ್ಪಿದರೆ ಸಾಮಾಜಿಕವಾಗಿ, ರಾಜಕೀಯವಾಗಿ ದಲಿತರಿಗೆ ಅನ್ಯಾಯವಾಗುತ್ತಿತ್ತು.‌‌ ಮೀಸಲಾತಿಯಿಂದ ವಂಚಿತರಾಗುತ್ತಿದ್ದರು. ಹಿಂದೂ ಮನುವಾದಿ ನಾಯಕರ ಈ ಅಜೆಂಡಾ ಆಗಿನ ಮುಸ್ಲಿಂ ನಾಯಕರಿಗೆ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಮುಸ್ಲಿಂ ಕೋಮುವಾದಿ, ಮುಸ್ಲಿಂ ದಲಿತ ವಿರೋಧಿ ನಿಲುವನ್ನು ಅಂಬೇಡ್ಕರ್ ವಿರೋಧಿಸಿದರೇ ವಿನಹ ಅವರು ಇಸ್ಲಾಂ ಧರ್ಮವಿರೋಧಿ ಆಗಿರಲಿಲ್ಲ.

ಅಂಬೇಡ್ಕರ್ ಸಾರಥ್ಯದ ಬಹಿಷ್ಕೃತ ಭಾರತ ಪತ್ರಿಕೆಯಲ್ಲಿ ಮುಸ್ಲಿಂ ಚಿಂತಕರ, ಸಮಾಜವಾದಿಗಳ ಲೇಖನಗಳು ಪ್ರಕಟವಾಗುತ್ತಿದ್ದವು. ಆ ಎಲ್ಲಾ ಲೇಖನಗಳು ಮುಸ್ಲಿಮರ ಸಾಮಾಜಿಕ, ರಾಜಕೀಯ, ಅರ್ಥಿಕ ಸುಧಾರಣೆಯ ಪರವಾಗಿದ್ದವೇ ಆಗಿದ್ದವು. ಒಂದು ಹಂತದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವ ಬಗ್ಗೆಯೂ ಡಾ ಬಿ ಆರ್ ಅಂಬೇಡ್ಕರ್ ಯೋಚಿಸಿದ್ದರು.

ಮುಸ್ಲೀಮರು ಮತ್ತು ದಲಿತರ ಉದ್ದಾರ ಅಂಬೇಡ್ಕರ್ ರ ಒಂದು ದೊಡ್ಡ ಆಶಯವಾಗಿತ್ತು. ಅದಕ್ಕಾಗಿಯೇ ಅವರು ಸಂವಿದಾನ ರಚನಾ ಸಭೆಯನ್ನು ಪ್ರವೇಶ ಮಾಡಬೇಕಿತ್ತು. ಯಾರೂ ಕೂಡಾ ಅಂಬೇಡ್ಕರ್ ರನ್ನು ಈ ನಿಟ್ಟಿನಲ್ಲಿ ಬೆಂಬಲಿಸದೇ ಇದ್ದಾಗ ಅಸೆಂಬ್ಲಿಯಲ್ಲಿ ಯೋಗೇಂದ್ರನಾಥ್ ಮಂಡಲ್ ಅಂಬೇಡ್ಕರ್ ಹೆಸರನ್ನು ಸೂಚಿಸಿದ್ದರು. ಈ ಸೂಚನೆಗೆ ಬೆಂಬಲ‌ ನೀಡಿದ್ದು ಮುಸ್ಲಿಂ ಲೀಗ್. ಇದರಿಂದಾಗಿಯೇ ಅಂಬೇಡ್ಕರ್ ಸಂವಿಧಾನ ರಚನಾ ಸಭೆ ಪ್ರವೇಶಿಸುವುದು ಸಾಧ್ಯವಾಯಿತು. ಸಂವಿಧಾನದಲ್ಲಿ ದಲಿತರು, ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರು ಮತ್ತು ಶೋಷಿತರಿಗೆ ಸಮಾನ ಹಕ್ಕುಗಳು ಮತ್ತು ಮೀಸಲಾತಿಗಳನ್ನು ನೀಡಲು ಸಾಧ್ಯವಾಯಿತು.

ಮಹಾ ಮಾನವತಾವಾದಿ ಡಾ ಬಿ ಆರ್ ಅಂಬೇಡ್ಕರ್ ಇಸ್ಲಾಂ ವಿರೋಧಿಯಾಗಿದ್ದರು ಎನ್ನುವ ಚಕ್ರವರ್ತಿ ಸೂಲಿಬೆಲೆ ಈ ಮೂಲಕ ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಅವಮಾನ ಮಾಡಿದ್ದಾರೆ. ಅಂಬೇಡ್ಕರ್ ಕೋಮುವಾದ, ಅಸ್ಪೃಶ್ಯತೆ, ಅಸಮಾನತೆಯ ವಿರೋಧಿಯಾಗಿದ್ದರು. ಕೋಮುವಾದದ ವಿರೋಧವೆಂದರೆ ಅದು ಹಿಂದೂ ಕೋಮುವಾದವಿರಲಿ, ಮುಸ್ಲಿಮ್ ಕೋಮುವಾದವಿರಲಿ. ಕೋಮುವಾದಕ್ಕೆ ವಿರೋಧವಷ್ಟೆ. ಜನಾಂಗ, ಸಮುದಾಯದ ವಿರೋಧಿ ಎಂದರ್ಥವಲ್ಲ. ಡಾ ಬಿ ಆರ್ ಅಂಬೇಡ್ಕರ್ ರವರ ಈಗಿನ ಭಾರತೀಯ ವಾರಸುದಾರರಾದ ಹಿಂದೂ ಮುಸ್ಲೀಮರೆಲ್ಲರೂ ಕೋಮುವಾದ, ಅಸ್ಪೃಶ್ಯತೆ, ಅಸಮಾನತೆಯ ವಿರೋಧಿಗಳೇ ಆಗಿದ್ದಾರೆ. ಚಕ್ರವರ್ತಿ ಸೂಲಿಬೆಲೆಯ ಅಂಬೇಡ್ಕರ್ ವಿರೋಧಿ ಕುತಂತ್ರಕ್ಕೆ ಈ ನೆಲದ ಅಂಬೇಡ್ಕರ್ ವಾದಿಗಳು ಬಲಿಯಾಗುವುದಿಲ್ಲ. ಅಂಬೇಡ್ಕರ್ ವಾದ ಎಂದರೆ ಪ್ರಜ್ಞೆ ಎಂಬ ಪ್ರಾಥಮಿಕ ಜ್ಞಾನವೇ ಇಲ್ಲದೆ ಸೂಲಿಬೆಲೆ ವ್ಯರ್ಥ ಪ್ರಯತ್ನ ಮಾಡಿದ್ದಾರಷ್ಟೆ.

– ನವೀನ್ ಸೂರಿಂಜೆ

Read Also: ಮುಗಿಯದ ಕಾವೇರಿ ವಿವಾದ: ಅಂಬೇಡ್ಕರ್ ಒದಗಿಸುವ ಪರಿಹಾರಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights