ರೈತರ ವಿರುದ್ದ ದೊಣ್ಣೆ ಎತ್ತಿಕೊಳ್ಳಲು ಕಾರ್ಯಕರ್ತರಿಗೆ ಕರೆ; ಹರ್ಯಾಣ ಸಿಎಂ ವಿಡಿಯೋ ವೈರಲ್!
ಹೊಸದಾಗಿ ಹುಟ್ಟಿಕೊಂಡಿರುವ ರೈತ ಸಂಘಟನೆಗಳನ್ನು ನಿಯಂತ್ರಿಸಬೇಕಿದೆ. ರೈತರನ್ನು ಎದುರಿಸಲು ಕೋಲು ಎತ್ತಿಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್ ಕರೆಕೊಟ್ಟಿರುವ ವಿಡಿಯೋ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.
ಇತ್ತೀಚೆಗೆ ಮಾತನಾಡಿದ್ದ ಅವರು, ರೈತರನ್ನು ನಿಯಂತ್ರಿಸಬೇಕಿದೆ. ಪ್ರತಿ ಜಿಲ್ಲೆಯಲ್ಲಿ, ವಿಶೇಷವಾಗಿ ಉತ್ತರ ಹಾಗೂ ಪಶ್ಚಿಮ ಹರ್ಯಾಣದಲ್ಲಿ ಈ ಸಮಸ್ಯೆ ಇಲ್ಲ. ಇಲ್ಲೇ ನಮ್ಮವರನ್ನು ಸ್ವಯಂಸೇವರಕರನ್ನಾಗಿ ಮಾಡಿ. 500-1000ರ ಗುಂಪು ಮಾಡಿ. ಪ್ರತಿ ಜಾಗದಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಕೋಲು ಎತ್ತಿಕೊಳ್ಳಿ… ಎಂದು ಕರೆ ಕೊಟ್ಟಿದ್ದ ವಿಡಿಯೋ ವೈರಲ್ ಆಗಿದೆ.
ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ. ಕೋಲು ಎತ್ತಿಕೊಂಡರೆ ಸಮಯದ ಬಗ್ಗೆ ಚಿಂತೆ ಮಾಡಬೇಡಿ. ತಿಂಗಳೆರಡು ತಿಂಗಳಾದರೂ, ಇಲ್ಲಿ ಕಲಿಯುವುದಕ್ಕಿಂತ ಅಲ್ಲಿ ಕಲಿಯುತ್ತೀರಿ. ಲೀಡರ್ ಆಗಿಬಿಡಬಹುದು. ಇದು ಇತಿಹಾಸದಲ್ಲಿ ದಾಖಲಾಗಿ ಬಿಡುತ್ತದೆ ಎಂದು ಪ್ರೇರಣೆಯ ಮಾತುಗಳನ್ನಾಡಿದ್ದಾರೆ.
ಭಾನುವಾರ ನಡೆದ ಬಿಜೆಪಿಯ ಕಿಸಾನ್ ಮೋರ್ಚಾದ ಸಭೆಯಲ್ಲಿ ಮಾತನಾಡಿದ ಅವರು, ಜೈಲಿಗೆ ಹೋಗಲು ಸಿದ್ದವಿರುವವರು ಸಂಘಟಿತರಾಗುವಂತೆ ಕರೆ ನೀಡಿದ್ದಾರೆ. ರೈತ ಹೋರಾಟ ಆರಂಭವಾದಾಗಿನಿಂದ ರೈತರ ವಿರುದ್ಧ ಮಾತನಾಡುತ್ತಾ ಬಂದಿರುವ ಖಟ್ಟರ್ ಈ ವಿಡಿಯೋ ಹೋರಾಟ ನಿರಂತರ ರೈತರನ್ನು ಇನ್ನಷ್ಟು ಕೆರಳಿಸಿದೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದು ವರ್ಷದಿಂದ ಪಂಜಾಬ್ನಲ್ಲಿ ನಂತರದಲ್ಲಿ ಹರ್ಯಾಣದಲ್ಲಿ ರೈತರು ಹೋರಾಟ ಆರಂಭಿಸಿದರು. ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿರುವ ಹರ್ಯಾಣ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದಾಗಲೆಲ್ಲಾ, ತೀವ್ರವಾದ ಪ್ರತಿಭಟನೆ ವ್ಯಕ್ತವಾಗಲಾರಂಭಿಸಿತು.
ಕಳೆದ ತಿಂಗಳು ಬಸ್ತಾರಾ ಟಾಲ್ಪ್ಲಾಜ ಬಳಿ ಎಸ್ಡಿಎಂ ರೈತರ ತಲೆ ಒಡೆಯುವಂತೆ ಕರೆ ನೀಡಿದ್ದರು, ಆಗಲೂ ಹಿಂಸಾಚಾರ ನಡೆದಿತ್ತು. ಇದನ್ನು ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದರೂ ಕೂಡ. ಅಧಿಕಾರವನ್ನು ಪ್ರಶ್ನಿಸುತ್ತಿರುವ ರೈತರ ಮೇಲೆ ಪ್ರತಿಕಾರದ ನಡೆಯನ್ನು ಅನುಸರಿಸುತ್ತಿರುವ ಖಟ್ಟರ್ ಅವರ ನಿಲುವನ್ನು ರೈತ ಸಂಘಟನೆಗಳು ತೀವ್ರವಾಗಿ ವಿರೋಧಿಸಿ, ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಲಾಖಿಮ್ಪುರ್ ಖೇರಿ ಹಿಂಸಾಚಾರವನ್ನು ಪ್ರತಿಭಟಿಸಿ, ಹಾಗೂ ಖಟ್ಟರ್ ಹೇಳಿಕೆಯನ್ನು ಖಂಡಿಸಿ ಅಕ್ಟೋಬರ್4ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.
ಛತ್ತೀಸ್ಘಡ ಮುಖ್ಯಮಂತ್ರಿ ಪ್ರತಿಕ್ರಿಯೆ
ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಹೇಳಿಕೆ ಹಾಗೂ ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಆಗಿರುವ ದಾಳಿಯನ್ನು ಛತ್ತೀಸ್ಘಡದ ಮುಖ್ಯಮಂತ್ರಿ ಭೂಪೇಶ್ ಭಾಗೇಲ್ ಅವರು ಕಟುವಾಗಿ ಟೀಕಿಸಿದ್ದಾರೆ.
“ಲಖಿಂಪುರ್ ಖೇರಿಗೆ ಭೇಟಿ ನೀಡಲು ಹಾಗೂ ಸಂತ್ರಸ್ತ ರೈತ ಕುಟುಂಬವನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ. ನಿನ್ನೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ. ಸೀತಾಪುರಕ್ಕೆ ಅವರು ತೆರಳದಂತೆ, ಯಾವುದೇ ವಾರಂಟ್ ಇಲ್ಲದೆಯೂ ತಡೆದಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ಬಡತನ, ನಿರುದ್ಯೋಗ: ರಾಜ್ಯದಲ್ಲಿ ಒಂದೇ ವರ್ಷದಲ್ಲಿ 850 ಜನರು ಆತ್ಮಹತ್ಯೆ