ಆಪರೇಷನ್ ಕಮಲದ ಜನಕ ಬಿಎಸ್ ಯಡಿಯೂರಪ್ಪ- ಸಿದ್ದರಾಮಯ್ಯ ಟೀಕೆ!
ಆಪರೇಷನ್ ಕಮಲದ ಜನಕ ಬಿಎಸ್ ಯಡಿಯೂರಪ್ಪ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. 2008ರಲ್ಲಿ ಬಿಎಸ್ ಯಡಿಯೂರಪ್ಪ ಆಪರೇಷನ್ ಕಮಲ ಹುಟ್ಟುಹಾಕಿದರು. ಆಗಿನಿಂದಲೂ ಅದು ಮುಂದುವರೆದಿದೆ ಎಂದು ವ್ಯಂಗ್ಯವಾಡಿದ್ದಾರೆ.
“ಸಂವಿಧಾನಕ್ಕೆ ವಿರುದ್ಧವಾದ ಸರ್ಕಾರ ಇದಾಗಿದೆ. ಆಪರೇಷನ್ ಕಮಲ ಹುಟ್ಟುಹಾಕಿದವರು ಬಿಎಸ್ ಯಡಿಯೂರಪ್ಪ. ಯಡಿಯೂರಪ್ಪ ಒಂದು ಬಾರಿ ಕನ್ನಡಿಯ ಮುಂದೆ ನಿಂತು ಕೊಟ್ಟ ಭರವಸೆಯಲ್ಲಿ ಯಾವುದನ್ನು ಈಡೇರಿಸಿದ್ದೀರಿ ಅನ್ನೋದನ್ನ ಅವಲೋಕನ ಮಾಡಿಕೊಳ್ಳಲಿ” ಎಂದು ಸಲಹೆ ಕೊಟ್ಟಿದ್ದಾರೆ.
2018ರಲ್ಲಿ ಅವರು ಕೊಟ್ಟ ಭರವಸೆ ನೆನಪು ಮಾಡಿಕೊಂಡು ಏನೇನ್ ಸಾಧನೆ ಮಾಡಿದ್ದಾರೆ ಅನ್ನೊದನ್ನ ಹೇಳಲಿ. ತಮ್ಮ ಪ್ರಣಾಳಿಕೆ ಇಟ್ಟುಕೊಂಡು ಬರಲಿ. ನಾವು ನಮ್ಮ ಪ್ರಣಾಳಿಕೆ ಇಟ್ಟುಕೊಂಡು ಬರುತ್ತೇವೆ. ನಮ್ಮ ಸರ್ಕಾರ ಕೊಟ್ಟ ಭರವಸೆಗಳನ್ನು ಎಷ್ಟು ಈಡೇರಿಸಿದ್ದೇವೆ? ನೀವು ಎಷ್ಟು ಈಡೇರಿಸಿದ್ದೀರಿ ಎನ್ನುವುದನ್ನ ಬಹಿರಂಗವಾಗಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.
“ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂಜಿನ್ ಆಫ್ ಆಗಿರುವ ಬಸ್ ಡ್ರೈವರ್ ಇದ್ದಂತೆ, ಅದಕ್ಕೆ ಇನ್ನೂ ಸರ್ಕಾರ ಟೇಕಾಫ್ ಆಗಿಲ್ಲ. ಇನ್ನೂ ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಎಂಬ ಮಾತೇ ಇಲ್ಲದಂತಾಗಿದೆ” ಎಂದು ಸಿದ್ದರಾಮಯ್ಯ ಇಂದು ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಗೇಲಿ ಮಾಡಿದ್ದಾರೆ. ಅಧಿವೇಶನದಲ್ಲಿ ಸಿಎಂ ವೈಫಲ್ಯತೆಯ ಕುರಿತು ಮಾತನಾಡಿದ್ದ ಸಿದ್ದರಾಮಯ್ಯ, “ನಮ್ಮ ಸರ್ಕಾರವನ್ನು ಟೇಕಾಫ್ ಆಗಿಲ್ಲ ಅಂತಾ ಕಳೆದ ಬಿಜೆಪಿ ನಾಯಕರು ಟೀಕಿಸುತ್ತಿದ್ದರು. ಆದರೆ, ಯಡಿಯೂರಪ್ಪ ಇಂಜಿನ್ ಆಫ್ ಆಗಿರುವ ಬಸ್ ಡ್ರೈವ್ ಮಾಡುತ್ತಿದ್ದಾರೆ. ಈಗ ಯಾವ ಶಾಸಕರನ್ನಾದರೂ ಕೇಳಿ ಯಾರಿಗಾದರೂ ಯಾವುದಾದರೂ ಅನುದಾನ ಬಂದಿದೆಯಾ.ಯಾರು ಕೇಳಿದ್ರೂ ಕೊರೋನಾ ಹೆಸರು ನೆಪ ಹೇಳುತ್ತಾರೆ. ದುಡ್ಡಿಲ್ಲ ಎನ್ನುತ್ತಾರೆ. ಹಾಗಾದರೆ ಇದ್ದ ಹಣ ಏನಾಯ್ತು?” ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.