ಉಪಚುನಾವಣೆ: ಕೈ-ತೆನೆ ಪಕ್ಷಗಳಿಗೆ ಶಾಕ್; ಕಾಂಗ್ರೆಸ್, JDS ಮುಖಂಡರು BJPಗೆ ಪಕ್ಷಾಂತರ!
ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ಇನ್ನೆರಡು ವಾರಗಳಷ್ಟೇ ಬಾಕಿ ಇವೆ. ಮೂರು ಪಕ್ಷಗಳು ಚುನಾವಣೆಗೆ ತಯಾರಿ, ಪ್ರಚಾರ ನಡೆಸುತ್ತಿವೆ. ಅದರಲ್ಲೂ ಬಿಜೆಪಿ ಮಾತ್ರ ಕಾಂಗ್ರೆಸ್, ಜೆಡಿಎಸ್ ಮುಖಂಡರ ಭೇಟೆಯನ್ನು ಮುಂದುವರೆಸಿದೆ. ಆರ್ಆರ್ನಗರ ಕ್ಷೇತ್ರದ ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮಾಜಿ ಮೇಯರ್, ಕಾರ್ಪೋರೇಟರ್ಸ್ ಮತ್ತು ಸದಸ್ಯರು ಹಾಗೂ ಸ್ಥಳೀಯ ಕಾರ್ಪೋರೇಟಿವ್ ಸೊಸೈಟಿಯ ಸದಸ್ಯರು ಸೇರಿದಂತೆ 34 ಮಂದಿ ಬಿಜೆಪಿ ಸೇರಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅವರಿಗೆ ಮತ್ತಷ್ಚು ಬೆಂಬಲ ಸಿಕ್ಕಂತಾಗಿದೆ.
ವಿವಿಧ ಸಮುದಾಯಗಳ ಮುಖಂಡರು ಬಿಜೆಪಿ ಸೇರಿರುವುದರಿಂದ ನವೆಂಬರ್ 3 ರಂದು ನಡೆಯುವ ಉಪ ಚುನಾವಣೆ ರಂಗು ಮತ್ತಷ್ಟು ಏರಿದೆ.
ಜಾಲಹಳ್ಳಿ ವಾರ್ಡ್ ಮಾಜಿ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ನಾರಾಯಣಸ್ವಾಮಿ, ಜಾಲಹಳ್ಳಿ ವಾರ್ಡ್ ಮಾಜಿ ಕಾರ್ಪೊರೇಟರ್ ಶ್ರೀನಿವಾಸಮೂರ್ತಿ, ಯಶವಂತಪುರ ಮಾಜಿ ಕಾರ್ಪೊರೇಟರ್ ಜಿಕೆ ವೆಂಕಟೇಶ್, ಹೆಚ್ ಎಂ ಟಿ ವಾರ್ಡ್ ಮಾಜಿ ಕಾರ್ಪೊರೇಟರ್ ಆಶಾ ಸುರೇಶ್, ಲಕ್ಷ್ಮೀ ದೇವಿನಗರ ವಾರ್ಡ್ ಮಾಜಿ ಕಾರ್ಪೊರೇಟರ್ ವೇಲು, ಕೊಟ್ಟಿಗೆಪಾಳ್ಯ ವಾರ್ಡ್ ಮಾಜಿ ಕಾರ್ಪೊರೇಟರ್ ಮೋಹನ್ ಕುಮಾರ್, ಲಗ್ಗೆರೆ ವಾರ್ಡ್ ನ ನಾಮನಿರ್ದೇಶಿತ ಬಿಬಿಎಂಪಿ ಸದಸ್ಯ ಸಿದ್ದೇಗೌಡ , ಆರ್ ಆರ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನಂದಾ ಬೋರೇಗೌಡ್ರು, ಜ್ಞಾನಭಾರತಿ ವಾರ್ಡ್ ಮಾಜಿ ಕಾರ್ಪೊರೇಟರ್ ಗೋವಿಂದರಾಜು ಸೇರಿದಂತೆ ಕೆಲ ಜೆಡಿಎಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
2017ರಲ್ಲಿ ಬಿಬಿಎಂಪಿ ಕೌನ್ಸಿಲ್ ನಲ್ಲಿ ಕಾಂಗ್ರೆಸ್ ಶಾಸಕ ಮುನಿರತ್ನ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮಾಜಿ ಕಾರ್ಪೋರೇಟರ್ ಮಮತಾ ವಾಸುದೇವ್ ಆತ್ಮಹತ್ಯೆ ಬೆದರಿಕೆ ಹಾಕಿದ್ದರು.
ಇದರ ಜೊತೆಗೆ ಕಾಂಗ್ರೆಸ್ ನ ಆಶಾ ಸುರೇಶ್ ಮತ್ತು ಜೆಡಿಎಸ್ ಮಂಜುಳಾ ನಾರಾಯಣಸ್ವಾಮಿ ಕೂಡ ಮುನಿರತ್ನ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: Fact Check: ಹಳೆಯ ವಿಡಿಯೋದಲ್ಲಿ ಖುಷ್ಬೂ ಸುಂದರ್ ಕಪಾಳಮೋಕ್ಷ ಮಾಡಿದ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾ?