ಮೈಸೂರು ಬೈಕ್ ಸವಾರ ಸಾವು ಪ್ರಕರಣ: ಸ್ಥಳೀಯರಿಂದ ಏಟು ತಿಂದ ಪೊಲೀಸರಿಗೆ ಪ್ರಶಂಸನಾ ಪತ್ರ!
ಮೈಸೂರಿನಲ್ಲಿ ಬೈಕ್ ಸವಾರನೊಬ್ಬ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆಗೆ ಸಂಚಾರಿ ಪೊಲೀಸರೇ ಕಾರಣ ಎಂಬ ಆರೋಪದ ಮೇಲೆ ಹಲ್ಲೆಗೊಳಗಾದ ಪೊಲೀಸರಿಗೆ ಪ್ರಶಂಸನಾ ಪತ್ರವನ್ನು ನೀಡಲಾಗಿದೆ. ಇದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಭಾನುವಾರ ಮೈಸೂರಿನ ವಿ.ವಿ.ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಿಂಗ್ರಸ್ತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಸವಾರನ್ನನ್ನು ಸಂಚಾರಿ ಪೊಲೀಸರು ತಡೆಯಲು ಯತ್ನಸಿದರು. ದಂಡ ವಿಧಿಸುತ್ತಾರೆ ಎಂಬ ಭಯದಿಂದ ತಪ್ಪಿಸಿಕೊಳ್ಳಲು ಮುಂದಾದ ಬೈಕ್ ಸವಾರ ಆಯ ತಪ್ಪಿ ಕೆಳಗೆ ಬಿದ್ದಿದ್ದ. ಈ ವೇಳೆ ಹಿಂದೆ ಬಂದ ವ್ಯಾನ್ ಆತನಿಗೆ ಡಿಕ್ಕಿಹೊಡೆದು ಆತ ಸಾವನ್ನಪ್ಪಿದ್ದ. ಇದಕ್ಕೆ ಪೊಲೀಸರೇ ಕಾರಣ ಎಂದು ಕೋಪಗೊಂಡ ಸ್ಥಳೀಯರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿತ್ತು.
ಇದನ್ನೂ ಓದಿ: ಉದ್ಯೋಗ ಕೇಳಿದ್ರೆ ಮೋದಿ ಪಕೋಡ ಮಾರಿ ಅಂತಾರೆ; ಸಚಿವರು ಮಂಚ ಹತ್ತಿ ಅಂತಾರೆ: BJP ವಿರುದ್ಧ ಕಾಂಗ್ರೆಸ್ ವಾಗ್ದಾಳಿ!
ಇದೀಗ ಹಲ್ಲೆಗೊಳಗಾದ ಪೊಲೀಸರಿಗೆ ಪ್ರಶಂಸನಾ ಪತ್ರವನ್ನು ನೀಡಲಾಗಿದ್ದು, ಅಪಘಾತ ಸಮಯದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದಕ್ಕೆ ಈ ಗೌರವ ನೀಡಲಾಗಿದೆ ಎಂದು ಹೇಳಾಗಿದೆ. ಅಪಘಾತದ ಬೆನ್ನಲ್ಲೇ ಸ್ಥಳಕ್ಕೆ 112 ತುರ್ತು ವಾಹನ ಬಂದಿತ್ತು. ತುರ್ತು ಸ್ಪಂದನ ವಾಹನ ಸಿಬ್ಬಂದಿ ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲದೆ, ಶೀಘ್ರದಲ್ಲೇ ಮೃತನ ದೇಹವನ್ನು ಶವಾಗಾರಕ್ಕೆ ತಲುಪಿಸಿದ್ದರು. ಅಪಘಾತಗೊಂಡಿದ್ದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಲಾಗಿದ್ದು, ಮೈಸೂರು ಪೊಲೀಸ್ ಆಯುಕ್ತರು ಪೊಲೀಸರಿಗೆ ಬುಧವಾರ ಪ್ರಶಂಸನಾ ಪತ್ರ ನೀಡಿದ್ದಾರೆ.
ಪ್ರಶಂಸನಾ ಪತ್ರ ಪಡೆದ ಪೊಲೀಸ್ ಸಿಬ್ಬಂದಿಗಳ ಪಟ್ಟಿ ಹೀಗಿದೆ:
1. ಸ್ವಾಮಿನಾಯಕ: ಎ.ಎಸ್.ಐ, ವಿ.ವಿ.ಪುರಂ ಸಂಚಾರ ಠಾಣೆ
2. ಮಾದೇಗೌಡ: ಎ.ಎಸ್.ಐ. ವಿ.ವಿ.ಪುರಂ ಸಂಚಾರ ಠಾಣೆ
3. ಲೋಕೇಶ್ ಎ.ಎಂ: ಸಿ.ಹೆಚ್.ಸಿ. 416, ವಿ.ವಿ.ಪುರಂ ಸಂಚಾರ ಠಾಣೆ
4. ಶಿವನಾಗ: ಸಿ.ಪಿ.ಸಿ. 948, ವಿ.ವಿ.ಪುರಂ ಸಂಚಾರ ಠಾಣೆ
5. ರಮೇಶ್: ಸಿ.ಪಿ.ಸಿ. 602, ವಿ.ವಿ.ಪುರಂ ಸಂಚಾರ ಠಾಣೆ
6. ಗಣೇಶ್: ಹೆಚ್.ಆರ್: ಸಿ.ಹೆಚ್.ಸಿ. 603, ವಿಜಯನಗರ ಠಾಣೆ
7. ಭಾಸ್ಕರ್; ಎ.ಪಿ.ಸಿ 133, ಸಂಜೀವಿನಿ ತುರ್ತು ಚಿಕಿತ್ಸಾ ವಾಹನ ಚಾಲಕ
8. ಪಿ. ಮಂಜು: ಎ.ಪಿ.ಸಿ. 123, 112 ವಾಹನ ಚಾಲಕ
ಇದನ್ನೂ ಓದಿ: ಶಿವಮೊಗ್ಗ ರೈತ ಮಹಾಪಂಚಾಯತ್: ರಾಕೇಶ್ ಟಿಕಾಯತ್ ವಿರುದ್ದ FIR ದಾಖಲು!