ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಆಡಿಯೋ : ಕಟೀಲ್ ಪರ ಕೆಎಸ್ ಈಶ್ವರಪ್ಪ ಬ್ಯಾಟಿಂಗ್!
ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ವಿಚಾರ ಇನ್ನೂ ತಣ್ಣಗಾಗಿಲ್ಲ. ಅದಾಗಲೇ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆನ್ನುವ ಸಿಎಂ ನಾಯಕತ್ವ ಬದಲಾವಣೆ ಆಡಿಯೋ ವೈರಲ್ ಆಗಿದ್ದು ಇದಕ್ಕೆ ಸಚಿವ ಕೆಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ‘ಇದು ಕಟೀಲ್ ವಿರುದ್ಧ ವ್ಯವಸ್ಥಿತ ಸಂಚು. ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಮೇಲೆ ನನಗೆ ನಂಬಿಕೆ ಇದೆ. ಅನುಮಾನ ಇದ್ದರೆ ತನಿಖೆ ಆಗಲಿ. ಅವರು ಧ್ವನಿಯಂತೆ ಆಡಿಯೋದಲ್ಲಿ ಅನುಕರಣೆ ಮಾಡಿದ್ದಾರೆ. ಇದನ್ನ ಯಾರೋ ಹುಚ್ಚರು ಮಾಡಿದ್ದಾರೆ. ಕಟೀಲ್ ಅವರು ಕೂಡ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲಾ ಎಂದು ಹೇಳಿದ್ದಾರೆ. ಹೀಗಿರುವಾಗ ತನಿಖೆ ಬೇಡ ಅನ್ನಿಸುತ್ತದೆ’ ಎಂದಿದ್ದಾರೆ.
ಇನ್ನೂ ವಿರೋಧಿ ಬಣದಲ್ಲಿ ಯಡಿಯೂರಪ್ಪ ಯಾವಾಗ ಸಿಎಂ ಸ್ಥಾನ ಬಿಟ್ಟಿಕೊಡುತ್ತಾರೆ? ಎಂದು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಇದರ ಮಧ್ಯೆ ಆಡಿಯೋ ವೈರಲ್ ಆಗಿದ್ದು, ಜುಲೈ 26ಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡುತ್ತಾರೆನ್ನುವ ಊಹಾಪೋಹಗಳು ಭಾರೀ ಸಂಚಲನ ಮೂಡಿಸಿದೆ.
ಬಿಜೆಪಿ ಪಡಸಾಲೆಯಲ್ಲಿ ದೊಡ್ಡ ಮಟ್ಟದಲ್ಲಿ ಆಡಿಯೋ ವೈರಲ್ ಆಗಿದ್ದು ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪ ಅವರು ಕೆಳಗಿಳಿಯುವುದು ನಿಶ್ಚಿತವಾಗಿದ್ದು, ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್.ಈಶ್ವರಪ್ಪ ತಂಡ ಸಂಪುಟದಿಂದ ಕಾಯಂ ಆಗಿ ಹೊರಬೀಳಲಿದೆ ಎಂದು ಕಟೀಲ್ ಹೇಳಿದ್ದಾರೆಂದು ತಿಳಿದುಬಂದಿದೆ.
ನಳಿನ್ ಕುಮಾರ್ ಕುಮಾರ್ ಕಟೀಲ್ ಮಾತನಾಡಿದ್ದಾರೆನ್ನಲಾದ ಆಡಿಯೋದಲ್ಲಿ ತುಳು ಭಾಷೆಯಲ್ಲಿ ಮಾತನಾಡಿರುವ ಈ ಆಡಿಯೋದಲ್ಲಿ ’ಯಾರಲ್ಲಿಯೂ ಹೇಳಲಿಕ್ಕೆ ಹೋಗ್ಬೇಡಿ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಟೀಮನ್ನು ತೆಗೆಯುತ್ತೇವೆ. ಹೊಸ ಟೀಮ್ ಮಾಡ್ತಾ ಇದ್ದೇವೆ. ಯಾರಲ್ಲೂ ಹೇಳ್ಬೇಡ. ಏನೂ ತೊಂದರೆ ಇಲ್ಲ. ಹೆದರಬೇಡ. ಇನ್ನು ಮುಂದೆ ಎಲ್ಲವೂ ನಮ್ಮ ಕೈಲಿದೆ. ಮೂರು ಜನರ ಹೆಸರು ಲಿಸ್ಟಲ್ಲಿದೆ. ಯಾರೂ ಆಗಬಹುದು. ಇಲ್ಲಿಯವರಿಗ್ಯಾರಿಗೂ ಕೊಡೋದಿಲ್ಲ. ಎಲ್ಲವೂ ಡೆಲ್ಲಿಯಿಂದಲೇ ಆಗುತ್ತದೆ ಎಂದು ಹೇಳಿರುವುದು ಕಂಡು ಬಂದಿದೆ.