ದೇಶಕ್ಕೆ 8 ಚಿನ್ನದ ಪದಕ ಗೆದ್ದು ತಂದ ಕ್ರೀಡಾಪಟು; ಇಂದು ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಿ ಬದುಕುತ್ತಿದ್ದಾರೆ!
ಅಂತರರಾಷ್ಟ್ರೀಯ ಮಟ್ಟದ ಶೂಟಿಂಗ್ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ 8 ಚಿನ್ನ, 5 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದು ತಂದಿದ್ದ ಭಾರತದ ಮೊದಲ ಮಹಿಳಾ ಪ್ಯಾರಾ ಶೂಟರ್ ದಿಲ್ರಾಜ್ ಕೌರ್ ಅವರು ಇಂದು ಕುಟುಂಬವನ್ನು ನಿರ್ವಹಣೆಗಾಗಿ, ಹೊಟ್ಟೆ ಪಾಡಿಗಾಗಿ ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಸೇರಿದಂತೆ ಕುರುಕಲು ತಿಂಡಿ ಮಾರಾಟ ಮಾಡಿ ಬದುಕುತ್ತಿದ್ದಾರೆ. ಇದು ಈ ದೇಶ ಒಬ್ಬ ಕ್ರೀಡಾಪಟುವನ್ನು ನಡೆಸಿಕೊಳ್ಳುತ್ತಿರುವ ರೀತಿ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಮೂಲತಃ ಉತ್ತರಾಖಂಡದ 38 ವರ್ಷದ ದಿಲ್ರಾಜ್ ಕೌರ್ ಅವರು ತಮ್ಮ 17 ವರ್ಷಗಳ ಕ್ರೀಡಾ ವೃತ್ತಿಜೀವನದಲ್ಲಿ 28 ಚಿನ್ನ, 5 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ 2007 ರಲ್ಲಿ ತೈವಾನ್ನಲ್ಲಿ ನಡೆದ ವಿಶ್ವ ಕ್ರೀಡಾಕೂಟ ಮತ್ತು 2015 ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಡಗಳು ಸೇರಿವೆ.
ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟು ದಿಲ್ರಾಜ್ ಕೌರ್ ಮತ್ತು ಆಕೆಯ ತಾಯಿ ಪ್ರತಿದಿನ ಡೆಹ್ರಾಡೂನ್ನ ಗಾಂಧಿ ಪಾರ್ಕ್ನ ಹೊರಗಡೆ ಬಿಸ್ಕತ್ತು, ಚಿಪ್ಸ್ ಸೇರಿದಂತೆ ಇತರೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡುತ್ತಾರೆ.
“ನಾವು ನನ್ನ ತಂದೆ, ಸಹೋದರ, ನನ್ನ ವೃತ್ತಿಜೀವನ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಆದರೆ ನನ್ನ ಕುಟುಂಬ ಯಾವತ್ತೂ ಛಲದಿಂದ ಬದುಕುವುದನ್ನು ಬಿಟ್ಟುಕೊಡುವುದಿಲ್ಲ. ಯಾವ ಕೆಲಸವು ಚಿಕ್ಕದಲ್ಲ ಎಂದು ನಾವು ನಂಬಿರುವುದರಿಂದ ಬೀದಿಗಳಲ್ಲಿ ಈ ವಸ್ತುಗಳನ್ನು ಮಾರಾಟ ಮಾಡಲು ನನಗೆ ಮುಜುಗರವಿಲ್ಲ” ಎಂದು ದಿಲ್ರಾಜ್ ಕೌರ್ ಹೇಳುತ್ತಾರೆ.
ಇದನ್ನೂ ಓದಿ: 08 ವರ್ಷಗಳ ಹಿಂದಿನ ಟ್ವೀಟ್; ಕ್ರಿಕೆಟ್ನಿಂದ ರಾಬಿನ್ಸನ್ ಅಮಾನತು; ರಾಬಿನ್ಸನ್ ಕ್ರಿಕೆಟ್ ಬದುಕು ಅಂತ್ಯ?
ದಿಲ್ರಾಜ್ ಕೌರ್ 2019 ರಲ್ಲಿ ತನ್ನ ತಂದೆಯನ್ನು ಮತ್ತು ಆಕೆಯ ಸಹೋದರನನ್ನು ಕಳೆದುಕೊಂಡಿದ್ದಾರೆ. ಆಕೆಯ ತಾಯಿ ಗುರುದೀಪ್ ಕೌರ್, ಉತ್ತರಾಖಂಡದ ರಾಜ್ಯತ್ವಕ್ಕಾಗಿ ನಡೆದ ಚಳವಳಿಯಲ್ಲಿ ಸಕ್ರಿಯ ಹೋರಾಟಗಾರರಾಗಿದ್ದರು.
ಸಹೋದರ ಮತ್ತು ತಂದೆಯ ಚಿಕಿತ್ಸೆಗಾಗಿ ದಿಲ್ರಾಜ್ ಕೌರ್ ತಮ್ಮ ಮನೆಯನ್ನು ಮಾರಾಟ ಮಾಡಿದ್ದು, ಸದ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ಡೌನ್ ನಮ್ಮವರನ್ನು, ನಮ್ಮ ಕೆಲಸಗಳನ್ನು ಕಸಿದುಕೊಂಡಿದೆ ಎಂದು ಆಕೆ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಇನ್ನು ಪತಿಯ ಮಾದಕ ವ್ಯಸನದಿಂದಾಗಿ ದಿಲ್ರಾಜ್ ಕೌರ್ ವೈವಾಹಿಕ ಜೀವನ ಮುರಿದು ಬಿದ್ದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದಿಲ್ರಾಜ್ ಕೌರ್ ಅವರ ಸಹಾಯಕ್ಕೆ ನಿಲ್ಲಿ ಎಂಬ ಪೋಸ್ಟ್ಗಳು ಹರಿದಾಡುತ್ತಿವೆ.
ತಮ್ಮ ಕೆಲಸವನ್ನು, ಸಾಧನೆಯನ್ನು ಗುರುತಿಸಿ ಸರ್ಕಾರ ಉದ್ಯೋಗ ನೀಡುತ್ತದೆ ಎಂದು ಹಲವು ಬಾರಿ ಪ್ರಯತ್ನಿಸಿದರೂ ಕೆಲಸ ಸಿಕ್ಕಿಲ್ಲ. ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ಚಿಪ್ಸ್, ಬಿಸ್ಕತ್, ಕುರುಕಲು ತಿಂಡಿ ಮಾರಾಟ ಮಾಡುತ್ತಿದ್ದೇನೆ ಎಂದು ದಿಲ್ರಾಜ್ ಕೌರ್ ತಿಳಿಸಿದ್ದಾರೆ.
ಇದನ್ನೂ ಓದಿ: ICC world cup: ನಾಯಕತ್ವ ಮರೆತ ಕೊಹ್ಲಿ; ಭಾರತದ ಸೋಲಿಗೆ 5 ಕಾರಣಗಳು!