ಪೊಲೀಸ್ ವಶದಲ್ಲಿದ್ದಾಗ ಆಫ್ರಿಕನ್ ಪ್ರಜೆ ಸಾವು : ಠಾಣೆ ಮುಂದೆ ವಿದೇಶಿ ಪ್ರಜೆಗಳ ಧರಣಿ..!
ಲಾಕ್ ಅಪ್ ಡೆತ್ ಆರೋಪಿಸಿ ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆ ಮುಂದೆ ಆಫ್ರಿಕನ್ ಪ್ರಜೆಗಳು ಧರಣಿ ಕುಳಿತಿದ್ದಾರೆ.
ನಿನ್ನೆ ಡ್ರಗ್ಸ್ ಕೇಸ್ ನಲ್ಲಿ ಜೊಯೆಲ್ ಮಾಲು ಎಂಬ ಆಫ್ರಿಕನ್ ಪ್ರಜೆಯನ್ನು ಬಂಧಿಸಲಾಗಿತ್ತು. ಬಂಧಿಸಿದ ಸಂದರ್ಭದಲ್ಲಿ ಆತನಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೆ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೊಯೆಲ್ ಮಾಲು ಸಾವನ್ನಪ್ಪಿದ್ದಾನೆ.
2015ರಲ್ಲಿ ಕೆಆರ್ ಪುರಂ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆಫ್ರಿಕನ್ ಪ್ರಜೆ ವಿದ್ಯಾಭ್ಯಾಸದ ಬಳಿಕವೂ ಆತ ತನ್ನ ತವರಿಗೆ ತೆರಳಿರಲಿಲ್ಲ. ಬೆಂಗಳೂರಿನಲ್ಲೇ ಮಾದಕವಸ್ತುವಿನ ಪೆಡ್ಲರ್ ಆಗಿದ್ದನೆಂದು ಪೊಲೀಸರು ಆರೋಪಿಸಿದ್ದಾರೆ. ಜೊತೆಗೆ 5 ಗ್ರಾಮ್ ಎಂಡಿಎಂಎ ಡ್ರಗ್ಸ್ ನ್ನು ಆತನಿಂದ ವಶಪಡಿಸಿಕೊಳ್ಳಲಾಗಿತ್ತು. ಖಾಕಿ ವಶದಲ್ಲಿದ್ದಾಗ ಆತ ಮೃತಪಟ್ಟಿರುವುದರಿಂದ ಆತನ ಸ್ನೇಹಿತರು ಹಾಗೂ ಆತನ ಸಂಬಂಧಿಕರು ಪೊಲೀಸ್ ಠಾಣೆ ಮುಂದೆ ಮಲಗಿ ಧರಣಿ ನಡೆಸಿದ್ದಾರೆ.
ಆತನ ಸಾವಿಗೆ ಪೊಲೀಸರೇ ಕಾರಣ ಎಂದು ದೂರಿದ ಆಫ್ರಿಕನ್ ಪ್ರಜೆಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಠಾಣೆಯ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮೃತ ಆಫ್ರಿಕನ್ ಪ್ರಜೆಯ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ.
ಪೊಲೀಸರು ವಿರುದ್ಧ ಘೋಷಣೆ ಕೂಗುತ್ತಾ ಆತನನ್ನು ವಶಕ್ಕೆ ಪಡೆದ ಪೊಲೀಸ್ ಸಂತೋಷ್ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಆಫ್ರಿಕನ್ ಪ್ರಜೆಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುವ ಮೂಲಕ ಚದುರಿಸಿದ್ದಾರೆ.