ಬಾವಿಗೆ ಬಿದ್ದ ಬಾಲಕ : ರಕ್ಷಣೆಗಾಗಿ ಹೋಗಿ ಬಾವಿಗೆ ಬಿದ್ದ 30 ಗ್ರಾಮಸ್ಥರು – ಮೂವರು ಮೃತ!
ಬಾವಿಗೆ ಬಿದ್ದ ಬಾಲಕನನ್ನು ರಕ್ಷಿಸಲು ಬಾವಿ ಮುಂದೆ ನಿಂತಿದ್ದ 30 ಗ್ರಾಮಸ್ಥರು ಗೋಡೆ ಕುಸಿದು ಬಾವಿಗೆ ಬಿದ್ದು ಇವರಲ್ಲಿ ಮೂವರು ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಂಜ್ ಬಸೋದಾದಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸುಮಾರು 30 ಗ್ರಾಮಸ್ಥರು ಬಾವಿಗೆ ಬಿದ್ದು ಮೂವರು ಮೃತಪಟ್ಟಿದ್ದಾರೆ. ಹತ್ತೊಂಬತ್ತು ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಬಾವಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸಲು ಗ್ರಾಮಸ್ಥರು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಬಾಲಕನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಜನರು ಅಧಿಕ ಸಂಖ್ಯೆಯಲ್ಲಿ ಬಾವಿಯ ಸುತ್ತಲು ನಿಂತುಕೊಂಡಿದ್ದರು. ಈ ವೇಳೆ ಬಾವಿ ಪ್ಯಾರಪೆಟ್ ಗೋಡೆ ಕುಸಿದ ಪರಿಣಾಮ ಸುಮಾರು 30 ಗ್ರಾಮಸ್ಥರು ಏಕಾಏಕಿ ಬಾವಿಗೆ ಬಿದ್ದಿದ್ದಾರೆ. ಬಾವಿ ಸುಮಾರು 50 ಅಡಿ ಆಳದಲ್ಲಿದ್ದು, ಸುಮಾರು 20 ಅಡಿಗಳಷ್ಟು ನೀರಿನ ಮಟ್ಟವನ್ನು ಹೊಂದಿದೆ.
ಘಟನೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಶಿವರಾಜ್ ಚೌಹಾನ್ ಅವರು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ ಎಂದರು.
“ಘಟನೆಯ ಸ್ಥಳದಲ್ಲಿ ನಾನು ನಿರಂತರವಾಗಿ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಅವರ ಮೇಲ್ವಿಚಾರಣೆಯಲ್ಲಿ ಸಿಕ್ಕಿಬಿದ್ದ ಜನರನ್ನು ರಕ್ಷಿಸುವಲ್ಲಿ ರಕ್ಷಣಾ ತಂಡಗಳು ತೊಡಗಿವೆ “ಎಂದು ರಾತ್ರಿಯಿಡೀ ಸ್ಥಳದಲ್ಲಿದ್ದ ವಿದಿಶಾ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವಸ್ ಸಾರಂಗ್ ಹೇಳಿದ್ದಾರೆ.
ಘಟನೆಯಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50,000 ನೀಡಿ ಉಚಿತ ಚಿಕಿತ್ಸಾ ಸೌಲಭ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಚೌಹಾನ್ ಘೋಷಿಸಿದ್ದಾರೆ.