ಸಾವನ್ನಪ್ಪಿದ್ದ ಪತ್ನಿಯ ಪ್ರತಿಮೆ ನಿರ್ಮಿಸಿ ಗೃಹಪ್ರವೇಶ ಕಾರ್ಯಕ್ರಮ ಮಾಡಿದ ವಾಣಿಜ್ಯೋದ್ಯಮಿ!
ಅಪಘಾತದಲ್ಲಿ ಮರಣಹೊಂದಿದ್ದ ತನ್ನ ಪತ್ನಿಯನ್ನು ಮರೆಯಲಾದರ ಉದ್ಯಮಿ, ಹೊಸ ಮನೆ ಕಟ್ಟಿಸಿ, ಅದರ ಗೃಹ ಪ್ರವೇಶ ಸಂದರ್ಭದಲ್ಲಿ ಆಕೆಯ ಪ್ರತಿಮೆ ಮಾಡಿಸಿ, ಮನೆಯ ಅಂಗಳದಲ್ಲಿಟ್ಟು ಬಂಧುಗಳನ್ನು ಆಕೆಯೇ ಸ್ವಾಗತಿಸುತ್ತಿದ್ದಾರೆ ಎಂಬಂತೆ ಭಾಸ ಉಂಟು ಮಾಡಿದ್ದಾರೆ.
ಮೂರು ವರ್ಷಗಳ (2017) ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಕೊಪ್ಪಳದ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿಯ ಪ್ರತಿಮೆಯನ್ನು ಮನೆಗೆ ಬಂದ ಅತಿಥಿಗಳಿಗೆಲ್ಲ ಮನೆಅಂಗಳದಲ್ಲಿ ಕಂಡು ಅಚ್ಚರಿ ಪಟ್ಟಿದ್ದಾರೆ.
ತಮ್ಮ ಹೊಸ ಮನೆಯ ಗೃಹ ಪ್ರವೇಶಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸುತ್ತಿರುವ ಅದೇ ಆಕಾರದ, ಅಷ್ಟೇ ಎತ್ತರದ ಅಷ್ಟೇ ಏಕೆ ಅವರೇ ಸಾಕ್ಷಾತ್ ಧರೆಗಿಳಿದು ಬಂದಂತೆ ಭಾಸವಾಗುವ ದೃಶ್ಯದಲ್ಲಿ ತಮ್ಮ ಪತ್ನಿಯ ಪ್ರತಿಮೆಯನ್ನು ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರು ಮಾಡಿಸಿದ್ದಾರೆ.
ಶ್ರೀನಿವಾಸ ಗುಪ್ತಾ ಅವರ ಪತ್ನಿಗೆ ಮನೆ ಕಟ್ಟಿಸಬೇಕೆಂಬ ಮಹದಾಸೆ ಇತ್ತು. ಅದು ಅವರ ಕನಸಾಗಿತ್ತು. ಮನೆಯ ವಿನ್ಯಾಸವೂ ಅವರಿಚ್ಛೆಯಂತೆಯೇ ಇತ್ತು. ಆದರೆ ಅವರೇ ಇರಲಿಲ್ಲ. ಹಾಗಾಗಿ, ಗೃಹಪ್ರವೇಶಕ್ಕೆ ಹೆಂಡತಿಯೂ ಪಾಲ್ಗೊಳ್ಳುವಂತಾಗಬೇಕು ಎಂದು ಯೋಚಿಸಿ, ಬೆಂಗಳೂರಿನ ಬೊಂಬೆ ಮನೆ ಕಲಾವಿದರನ್ನು ಸಂಪರ್ಕಿಸಿ, ರಬ್ಬರ್ ಮತ್ತು ಸಿಲಿಕಾನ್ ಮಟಿರಿಯಲ್ ಮೂಲಕ ಹೆಂಡತಿಯ ನೈಜರೂಪದ ಪ್ರತಿಮೆ ರೂಪಿಸಿದ್ದಾರೆ.
ಅದು ಯಾವುದೇ ಕೋನದಲ್ಲೂ ಬೊಂಬೆ ಅನಿಸಲ್ಲ. ಅವರೊಬ್ಬ ವ್ಯಕ್ತಿ ಎನ್ನುವಷ್ಟರಮಟ್ಟಿಗೆ ಆ ಕಲಾವಿದರು ಆಕೆಯ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ನಾನು ಜೀವನದಲ್ಲಿ ಹೆಚ್ಚು ಪ್ರೀತಿಸುವ ಜೀವ ಅದು. ದೇವರು ನನಗೆ ಇಷ್ಟು ಮಾತ್ರ ಶಕ್ತಿ ಕೊಟ್ಟಿದ್ದಾನೆ. ಜೀವ ತುಂಬುವ ಶಕ್ತಿ ನನಗೆ ಇದ್ದಿದ್ದರೆ ತಡ ಮಾಡುತ್ತಲೇ ಇರಲಿಲ್ಲ. ಇದಕ್ಕೆ ಬೆಲೆ ಕೇಳಬೇಡಿ. ನನ್ನವಳ ನೆನಪುಗಳಿಗೆ ಬೆಲೆಯನ್ನೇ ಕಟ್ಟಲಾಗಲ್ಲ ಎಂದು ಶ್ರೀನಿವಾಸ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಶಿಕ್ಷಣದ ಪಜೀತಿ; ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವೇ ಗತಿ!