ಸಾಲಮನ್ನಾ ಹೇಳಿಕೆಗೆ ಈಗಲೂ ಬದ್ಧ, ಫೆಬ್ರುವರಿಯಲ್ಲಿ ಸಂಪೂರ್ಣ ಸಾಲಮನ್ನಾ ಘೋಷಣೆ : ಸಿಎಂ
ರಾಯಚೂರು : ‘ರೈತರ ಸಾಲಮನ್ನಾ ಹೇಳಿಕೆಗೆ ನಾನು ಈಗಲೂ ಕೂಡ ಬದ್ದನಾಗಿದ್ದೇನೆ. ಫೆಬ್ರವರಿ ತಿಂಗಳಿನಲ್ಲಿ ಮಂಡಿಸಲಾಗುವ ಬಜೆಟ್ ನಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಂಪೂರ್ಣ ಸಾಲಮನ್ನಾ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಿಂಧನೂರಿನಲ್ಲಿ ನಡೆದ ರಾಜ್ಯಮಟ್ಟದ ಪಶು ಮತ್ತು ಮತ್ಸ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ ‘ಈ ಮುಂಚೆ ರೈತರ ಬೆಳೆಸಾಲವನ್ನು 4 ಹಂತಗಳಲ್ಲಿ ಮನ್ನಾ ಮಾಡಲಾಗುವುದು ಅಂತ ಹೇಳಿದ್ದೆ. ಆದರೇ ಈಗ ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್ ನಲ್ಲಿ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು ಮತ್ತು ಇದಕ್ಕಾಗಿ ಪ್ರತ್ಯೇಕ ಹಣ ತೆಗೆದಿಡಲಾಗುವುದು ‘ ಎಂದು ಹೇಳಿದರು.
ರೈತರ ಸಾಲಮನ್ನಾ ವಿಷಯದಲ್ಲಿ ರೈತ ಸಮುದಾಯ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದು ಬೇಡ ಎಂದ ಸಿಎಂ ಕುಮಾರಸ್ವಾಮಿ ‘ಈಗಾಗಲೇ ರೈತರ ಸಾಲಮನ್ನಾಗೆ ಸಂಬಂಧಿಸಿದಂತೆ ಒಂದು ಸಮಿತಿ ರಚಿಸಲಾಗಿದ್ದು, ವೈಜ್ಞಾನಿಕವಾಗಿ ರೈತನಿಗೆ ಈ ಸಾಲಮನ್ನಾ ಹಣ ತಲುಪಬೇಕು ಎಂಬ ಸದಾಶಯದೊಂದಿಗೆ ಇಡೀ ದೇಶದಲ್ಲಿಯೇ ಅತ್ಯುತ್ತಮವಾದ ವೈಜ್ಞಾನಿಕವಾದ ನಿಯಮವಾಳಿಗಳನ್ನು ಸಿದ್ದಪಡಿಸಲಾಗಿದ್ದು, ರೈತರು ಪಹಣಿ, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಮಾಹಿತಿ ನೀಡಿ ‘ ಎಂದು ಅವರು ಮನವಿ ಮಾಡಿದರು.