ರೈತರಿಗೆ ಎದುರಾದ ಮತ್ತೊಂದು ಸಂಕಷ್ಟ : ಕಾಡಿನ ಸಾಧು ಪ್ರಾಣಿಯಿಂದ ಅನ್ನದಾತರಿಗೆ ಕಾಟ
ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ರೈತರು ಬೆಳೆದ ಬೆಳೆಗೆ ಜಿಂಕೆಗಳು ದಾಳಿ ಹಿಡುತ್ತಿವೆ.ಇತ್ತೀಚೆ ಈ ಕಾಡಿನ ಸಾಧು ಪ್ರಾಣಿಗಳೂ ಕೂಡ ಅನ್ನದಾತರಿಗೆ ಕಾಟ ಕೊಡೋಕೆ ಶುರುಮಾಡಿವೆ.ಇವುಗಳ ಕಾಟದಿಂದ ಆಡಂಗಲ್ಲಿ ಅನುಭವಿಸೋಹಾಗಿಲ್ಲ ಅನ್ನೋಹಾಗೆ ಆಗಿದೆ. ಅವು ಕೊಡ್ತಿರೋ ಕಾಟ ತಾಳಲಾರದೆ ರೈತ ಕಂಗಾಲಾಗಿದ್ದಾನೆ. ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಮಾನವ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಅನೇಕ ಅನಾಹುತಗಳು ನಡೆದಿವೆ.ಅದರಲ್ಲೂ ಕಾಡು ಪ್ರಾಣಿಗಳು ಮನುಷ್ಯರ ದಾಳಿಯಿಂದ ಸತ್ತಿವೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಮನುಷ್ಯರೇ ಕಾಡು ಪ್ರಾಣಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೌಮ್ಯ ಸ್ವಭಾವದ ಜಿಂಕೆಗಳೂ ಕೂಡ ರೈತರ ಜಮೀನಿನಲ್ಲಿ ಬೆಳೆದ ಬೆಳೆಗೆ ದಾಳಿ ಇಟ್ಟು ಸಂಘರ್ಷಕ್ಕೆ ಇಳಿಯುತ್ತಿವೆ. ಎತ್ತ ನೋಡಿದರೂ ಗುಂಪು ಗುಂಪಾಗಿ ನಿಂತಿರೋ ಕೃಷ್ಣ ಮೃಗಗಳು.ಇವುಗಳನ್ನ ನೋಡಿ ಯಾವುದೋ ಕಾಡಿನ ದೃಷ್ಯಗಳಿರಬಹುದು ಅಂದ್ಕೊಂಡ್ರಾ? ಖಂಡಿತಾ ಇಲ್ಲ. ಇದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ದಿನ ನಿತ್ಯದ ಚಿತ್ರಣ. ಕಳೆದ ಹಲವಾರು ವರ್ಷಗಳಿಂದ ಬರಗಾಲಕ್ಕೆ ಸಿಲುಕಿದ್ದ ರೈತರು ಹಿಂಗಾರು ಮಳೆ ಚನ್ನಾಗಿ ಆಗಿದ್ರಿಂದ ಕಡಲೆ ಬಿತ್ತನೆ ಮಾಡಿದ್ದಾರೆ. ಬೆಳೆ ಕೂಡ ಚನ್ನಾಗಿ ಆಗಿತ್ತು.ಆದರೆ ಕೈಗೆ ಬಂದ ಬೆಳೆ ಬಾಯಿಗೆ ಬರೋ ಹೊತ್ತಿಗೆ ರೈತರ ಜಮೀನುಗಳಿಗೆ ಗುಂಪುಗುಂಪಾಗಿ ದಾಳಿ ಮಾಡ್ತಿರೋ ಕೃಷ್ಣಮೃಗಗಳು ಬೆಳೆಯನ್ನ ತಿಂದು ನಾಶ ಮಾಡ್ತಿವೆ.
ಅವುಗಳನ್ನ ಒಡೆದು ಓಡ್ಸೋಣ ಅಂದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ಜೈಲಿಗಾಕ್ತೀವಿ ಅಂತ ಹೆದರಿಸ್ತಾರಂತೆ. ಕೃಷ್ಣಮೃಗವನ್ನ ಬೇಟೆಯಾಡಿದ ಆರೋಪದ ಮೇಲೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬದುಕಿನುದ್ದಕ್ಕೂ ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆ ಕಣ್ಣಮುಂದೆ ಇರುವಾಗ ಯಾರು ತಾನೆ ಕೃಷ್ಣಮೃಗಗಳ ತಂಟೆಗೆ ಹೋಗೋಕೆ ಸಾಧ್ಯ ಹೇಳಿ.ಹೀಗಿರುವಾ ಸಾಮಾನ್ಯ ರೈತನ ಪಾಡೇನು ಅನ್ನುವಂತಾಗಿದೆ. ಇನ್ನೂ ಕಾಡಿನಿಂದ ರೈತರ ಜಮೀನುಗಳ ಕಡೆಗೆ ದಾಳಿ ಇಡುತ್ತಿರುವ ಕೃಷ್ಣ ಮೃಗಗಳು ಈಗಾಗಲೇ ಎಕರೆಗಟ್ಟಲೆ ಕಡಲೆ ಬೆಳೆಯನ್ನ ತಿಂದು ಮುಗಿಸಿವೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗ್ತಿಲ್ವಂತೆ, ಹೀಗಾದ್ರೆ ನಾವು ಬದುಕೋದಾದ್ರೂ ಹೇಗೆ? ನಮ್ಮನ್ನ ಈ ಸಂಕಷ್ಟದಿಂದ ಪಾರು ಮಾಡೋರಾದ್ರು ಯಾರು? ಅಂತಾರೆ ನೊಂದ ರೈತರು. ಒಟ್ಟಾರೆ ನೋಡೋಕೆ ಮುದ್ದು ಮುದ್ದಾಗಿರೋ ಸಾಧು ಪ್ರಾಣಿ ಎಂದೇ ಕರೆಯಲ್ಪಡುವ ಕೃಷ್ಣಮೃಗ ಅನ್ನದಾತನಿಗೆ ಕ್ರೂರ ಮೃಗದಂತೆ ಭಾಸವಾಗುತ್ತಿದೆ. ಕಾಡಿನಲ್ಲಿರಬೇಕಾದ ಪ್ರಾಣಿಗಳು ರೈತರ ಜಮೀನನ್ನೇ ಆವಾಸಸ್ಥಾನ ಮಾಡಿಕೊಂಡಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಅತ್ತ ಅವುಗಳನ್ನ ಕಾಡಿಗೂ ಅಟ್ಟದೇ, ಇತ್ತ ರೈತರಿಗೆ ಪರಿಹಾರವನ್ನೂ ಕೊಡದೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ..