ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ನಸುಕಿನ ಕಾರ್ಯಾಚರಣೆ; 06 ಉಗ್ರರ ಹತ್ಯೆ!
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನಿಗ್ರಹಿಸುವ ಕಾರ್ಯಾಚರಣೆ ಮುಂದುವರೆಯುತ್ತಲೇ ಇದೆ. ಇಂದು ಮುಂಜಾನೆ ಜಮ್ಮುವಿನ ಶೋಫಿಯಾನ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರರನ್ನು ಹತ್ಯೆ ಮಾಡಲಾಗಿದೆ. ಈ ಮೂಲಕ ಕಳೆದ 24 ಗಂಟೆಯಲ್ಲಿ 6 ಭಯೋತ್ಪಾದಕರನ್ನು ನಿಗ್ರಹಿಸಲಾಗಿದೆ.
ಆಮ್ಶಿಪೊರ ಭಾಗದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದು ಸೇನೆಯು ಇಂದು ಬೆಳಗ್ಗೆ 3 ಗಂಟೆಯ ನಸುಕಿನಲ್ಲಿ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸಿದ ಸೇನೆಯು ಮೂವರು ಉಗ್ರರನ್ನು ಹತ್ಯೆಮಾಡಿದೆ.
ಉಗ್ರರು ಯಾವ ಸಂಘಟನೆಗೆ ಸೇರಿದವರು ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.ಸದ್ಯ ಇವರ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಸೇನಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಇವರ ಬಳಿ ಕೆಲ ದಾಖಲೆಗಳಿದ್ದು, ಅವುಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಶುಕ್ರವಾರ ಮುಂಜಾನೆ ಕುಲ್ಗಮ್ ಭಾಗದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಈ ಪೈಕಿ ಜೈಲ್-ಎ-ಮೊಹ್ಮದ್ ಉಗ್ರ ಸಂಘಟನೆಯ ಕಮಾಂಡರ್ ಕೂಡ ಹತನಾಗಿದ್ದ.
ನಿನ್ನೆ ಮೃತಪಟ್ಟ ಜೆಎಎಂ ಸಂಘಟನೆಯ ಈ ಕಮಾಂಡರ್ ಅತ್ಯಾಧುನಿಕ ಸ್ಫೋಟಕ ತಯಾರಿಕೆಯಲ್ಲಿ ಪಳಗಿದ್ದ. ಭಾರತೀಯ ಭದ್ರತಾ ಸಿಬ್ಬಂದಿ ಮೇಲೆ ನಡೆದ ಸಾಕಷ್ಟು ದಾಳಿಯಲ್ಲಿ ಈತನ ಕೈವಾಡ ಇತ್ತು ಎನ್ನಲಾಗಿದೆ. ಈತನನ್ನು ಹೊಡೆದುರುಳಿಸುವ ಮೂಲಕ ಭಾರತೀಯ ಸೇನೆಗೆ ದೊಡ್ಡ ಜಯ ಸಿಕ್ಕಂತಾಗಿದೆ.