ಕೇಂದ್ರಕ್ಕೆ ಒರಿಸ್ಸಾ ಮುಖ್ಯಮಂತ್ರಿ ಪತ್ರದ ಹಿನ್ನಲೆ: ಎನ್ ಪಿ ಆರ್ ಅನಿರ್ಧಿಷ್ಟ ಕಾಲಾವಧಿ ಮುಂದೂಡಿಕೆ?
ಕರೊನ ಬಿಕ್ಕಟ್ಟು ಇಡೀ ದೇಶವನ್ನು ಚಿಂತೆಗೀಡು ಮಾಡಿರುವ ಸಮಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೊಂದಣಿಯನ್ನು ನಿಲ್ಲಿಸಬೇಕು ಎಂಬ ಕೂಗು ಹೆಚ್ಚಾಗಿತ್ತು. ಈಗ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವಿಷಯವಾಗಿ ಪತ್ರ ಬರೆದಿರುವ ಹಿನ್ನಲೆಯಲ್ಲಿ, ಏಪ್ರಿಲ್ 1 ರಿಂದ ಪ್ರಾರಂಭವಾಗಬೇಕಿದ್ದ, ಎನ್ ಪಿ ಆರ್ ಪ್ರಕ್ರಿಯೆ ಅನಿರ್ಧಿಷ್ಟಾವಧಿ ಕಾಲ ಮುಂದೂಡಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ.
ಶುಕ್ರವಾರ ಪ್ರಧಾನಿಯವರಿಗೆ ಪತ್ರ ಬರೆದಿದ್ದ ನವೀನ್ ಪಟ್ನಾಯಕ್ ಅವರು “ಸದ್ಯಕ್ಕೆ ನಾವೆಲ್ಲ ಕೊರೊನ ಸಾಂಕ್ರಾಮಿಕವನ್ನು ತಡೆಯುವುದಕ್ಕೆ ಹೋರಾಟದಲ್ಲಿ ನಿರತರಾಗಿದ್ದೇವೆ. ಈ ಸಮಯದಲ್ಲಿ ಜನಗಣತಿ ಮತ್ತು ಅದರ ಜೊತೆಗಿನ ಎಲ್ಲ ಚಟುವಟಿಕೆಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುವುದು ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಜನಗಣತಿ ಮತ್ತು ಅದರ ಜೊತೆಗಿನ ಚಟುವಟಿಕೆಗಳನ್ನು ಮುಂದೂಡಬೇಕು” ಎಂದು ಹೇಳಿದ್ದರು.
ನವೀನ್ ಪಟ್ನಾಯಕ್ ಅವರು ಕೇಂದ್ರ ಸರ್ಕಾರ ಹೊಸ ನಾಗರಿಕ ತಿದ್ದುಪಡಿ ಕಾಯ್ದೆಗೆ (ಸಿ ಎ ಎ) ಒಪ್ಪಿಗೆ ಸೂಚಿಸಿದ್ದರೂ, 2020ರ ಎನ್ ಪಿ ಆರ್ ಪ್ರಕ್ರಿಯೆಯಲ್ಲಿ, ಕೇಳಲಿದ್ದ ತಂದೆ-ತಾಯಿಯರ ಹುಟ್ಟಿದ ದಿನಾಂಕ ಮತ್ತು ಜನ್ಮ ಸ್ಥಳಗಳ ಮಾಹಿತಿ ಬಗೆಗಿನ ಪ್ರಶ್ನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.
2020ನೇ ಜನಗಣತಿ ಮತ್ತು ಎನ್ ಪಿ ಆರ್ ಪ್ರಕ್ರಿಯೆ ನಡೆಸಲು ಜನಸಂಪನ್ಮೂಲವನ್ನು ರಾಜ್ಯ ಸರ್ಕಾರಗಳೇ ಒದಗಿಸಬೇಕಾಗಿರುವ ಸಂದರ್ಭ ಇರುವುದರಿಂದ, ಕೊರೊನ ಭೀತಿಯ ಈ ಸಮಯದಲ್ಲಿ ಇದು ಹೆಚ್ಚಿನ ಸಮಸ್ಯೆ ಒಡ್ಡಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸಾಮಾನ್ಯವಾಗಿ ಜನಗಣತಿ ಮಾಡಲು ಶಾಲಾಶಿಕ್ಷಕರನ್ನು ನೇಮಿಸಲಾಗುತ್ತದೆ. ಈ ಶಾಲಶಿಕ್ಷಕ ಶಿಕ್ಷಕಿಯರು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡುವುದು ವಾಡಿಕೆ. ಈಗ ಕೊರೊನ ಸಾಂಕ್ರಾಮಿಕ ಭೀತಿಯಲ್ಲಿ ಶಿಕ್ಷಕರು ಮನೆಮನೆಗೆ ತೆರಳಿ ಈ ಕೆಲಸ ಮಾಡುವುದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಯಲಾಗಿದೆ.
ಪಟ್ನಾಯಕ್ ಅವರು ಬರೆದ ಪತ್ರದಲ್ಲಿ “ದೇಶದ ಮೊದಲ ಹಂತದ ಜನಗಣತಿಯಲ್ಲಿ ಸುಮಾರು 30 ಲಕ್ಷ ಜನ ಮನೆ ಮನೆಗೆ ತೆರಳಬೇಕಿದೆ. ಅವರಿಗೆಲ್ಲಾ ವಿಸ್ತೃತ ತರಬೇತಿ ನೀಡಬೇಕಿದೆ” ಆದುದರಿಂದ ಈ ಸಮಯದಲ್ಲಿ ಈ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಹೇಳಿದ್ದಾರೆ.
ಜನಗಣತಿಗೆ ಎಲ್ಲ ರಾಜ್ಯಗಳು ಸಹಕರಿಸಲೇಬೆಕಿದೆ. ಆದರೆ ಎನ್ ಪಿ ಆರ್ ಗೆ ಆ ನಿರ್ಬಂಧ ಇಲ್ಲ. ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ, ಚತ್ತೀಸ್ ಘರ್ ಮತ್ತು ಪುದುಚೆರಿ ವಿಧಾನಸಭೆಗಳಲ್ಲಿ ಎನ್ ಪಿ ಆರ್ ಪ್ರಕ್ರಿಯೆ ವಿರುದ್ಧ ನಿರ್ಣಯ ಮಂಜೂರು ಮಾಡಲಾಗಿದೆ.
ಈ ಎಲ್ಲಾ ನಿಟ್ಟಿನಿಂದ ಎನ್ ಪಿ ಆರ್ ಪ್ರಕ್ರಿಯೆ ಅನಿರ್ಧಿಷ್ಟ ಕಾಲಾವಧಿಯವರೆಗೆ ಮುಂದೂಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.