ಕಾಂಗ್ರೆಸ್ಗೆ ಗುಡ್ ಬೈ : ನಾನು ಬಿಜೆಪಿ ಸೇರುತ್ತಿರುವುದು ದೈವೇಚ್ಛೆ – ಸಿ.ಹೆಚ್.ವಿಜಯ್ ಶಂಕರ್
ಕಾಂಗ್ರೆಸ್ಗೆ ಗುಡ್ ಬೈ ಹೇಳಿದ ಸಿ.ಹೆಚ್.ವಿಜಯ್ ಶಂಕರ್ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಸೇರಲು ಮೈಸೂರಿನಿಂದ ಬೆಂಗಳೂರಿಗೆ ನಿರ್ಗಮಿಸಿದ ಸಿ.ಹೆಚ್.ವಿಜಯ್ಶಂಕರ್, ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಮತ್ತೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್ಗೆ ಬಿಜೆಪಿ ಬಿಟ್ಟು ಬಂದಿದ್ದ ಸಿಹೆಚ್ವಿ ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಲೋಕಸಭೆಯಲ್ಲಿ ಸಿದ್ದರಾಮಯ್ಯ ಶಿಫಾರಸ್ಸಿನ ಮೇಲೆ ಸಿಹೆಚ್ವಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಆದ್ರೆ ಪ್ರತಾಪ್ಸಿಂಹ ವಿರುದ್ದ ಸೋತ ವಿಜಯ್ಶಂಕರ್, ಸೋತ ನಂತರ ತಟಸ್ಥವಾಗಿದ್ದರು. ಇದೀಗ ಮತ್ತೆ ಬಿಜೆಪಿ ಸೇರ್ಪಡೆಗೆ ನಿರ್ಧಾರ ಮಾಡಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಸೇರುತ್ತಿರುವುದು ದೈವೇಚ್ಛೆ. ಶರತ್ತು ಇಲ್ಲದೆ ಸೇರುತ್ತಿದ್ದೇನೆ. ಇವತ್ತಿನಿಂದ ಪಕ್ಷ ಸಂಘಟನೆಗೆ ಸಮರ್ಪಿಸಿಕೊಳ್ಳುತ್ತಿದ್ದೇನೆ. ನನ್ನ ರಾಜಕೀಯ ಭವಿಷ್ಯ ಪಕ್ಷದ ಸಂಘಟನೆಗೆ ಬಿಟ್ಟಿದ್ದೇನೆ.
ಸಾರ್ವಜನಿಕ ಜೀವನದಲ್ಲಿ ಇರಬೇಕು ಅಂದ್ರೆ 2 ದಾರಿ. ಒಂದು ಚುನಾಯಿತ ಪ್ರತಿನಿಧೀಯಾಗಿ ಇರಬೇಕು. ಇಲ್ಲ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರಬೇಕು. ಜನಪ್ರತಿನಿಧಿಯಾಗಿ ಸಾಧ್ಯವಾಗಿಲ್ಲ. ಇದುವರೆಗೆ ನಾನು ಕಾಂಗ್ರೆಸ್ ಕಚೇರಿಗೆ ಕಾಲಿಟ್ಟಿಲ್ಲ. ಯಾವುದೇ ಸಭೆಗಳಿಗೆ ಆಹ್ವಾನಿಸಿಲ್ಲ. ಕಾಂಗ್ರೆಸ್ ನಲ್ಲಿ ಭಾವನಾತ್ಮಕ ಸಂಭಂಧಗಳಿಗೆ ಕೊರತೆ ಇದೆ. ಹೀಗಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ.
ಬಿಜೆಪಿ ನಮಗೆ ಆಹ್ವಾನ ಕೊಟ್ಟಿದೆ. ಹಿತೈಷಿಗಳ ಸಲಹೆ ಮೇರೆಗೆ ಈ ತೀರ್ಮಾನಕ್ಕೆ ಬಂದಿದ್ದೇನೆ. ಕಾಂಗ್ರೆಸ್ ನಲ್ಲಿ ಮೂಲ ವಲಸೆ ಎಂಬ ತಾರತಮ್ಯ ಇದೆ. ಸಿದ್ದರಾಮಯ್ಯ ವಿಚಾರದಲ್ಲೇ ಮೂಲ ವಲಸೆ ಎಂಬ ಮಾತು ಕೇಳಿಬಂತು. ಇದು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿತು. ಅಂತವರಿಗೇ ಇಂತಹ ಪ್ರಶ್ನೆ ಬಂದ್ರೆ ನಮ್ಮಂತಹವರ ಗತಿ ಏನು.? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪಕ್ಷ ಬದಲಾಯಿಸುವುದು ಮಹಾಪರಾಧವಲ್ಲ. ಸಾಮಾನ್ಯ ಜನರ ಜೊತೆ ಬೆರೆಯಬೇಕು ಎಂಬ ಉದ್ದೇಶವಿದೆ. ಲೋಕಸಭೆ ಚುನಾವಣೆ ನಂತರ ನಾನು ಮನೆಯಲ್ಲಿ ಕುಳಿತಿದ್ದೇನೆ. ಹೀಗೇ ಮುಂದುವರೆದರೆ ಜನಸಾಮಾನ್ಯರಿಂದ ದೂರ ಆಗ್ತೇನೆ. ಸದ್ಯಕ್ಕೆ ಜನರು ಕೊಟ್ಟ ಅಧಿಕಾರವೂ ಇಲ್ಲ. ಪಕ್ಷದ ಜವಾಬ್ದಾರಿಯೂ ಇಲ್ಲ. ಸಕ್ರಿಯವಾಗಿ ರಾಜಕೀಯದಲ್ಲಿ ಇರಬೇಕು ಅಂದ್ರೆ ಬಿಜೆಪಿ ಆಹ್ವಾನ ಸ್ವೀಕರಿಸಲೇಬೇಕು. ನಾನು ಅವಕಾಶವಾದಿ ರಾಜಕಾರಿಣಿ ಅಲ್ಲ.
ಅವಕಾಶವಂಚಿತ ರಾಜಕಾರಿಣಿ. ನಾನು 3 ಬಾರಿ ಅವಕಾಶ ವಂಚಿತನಾಗಿದ್ದೇನೆ. ಅವಕಾಶವಾದಿ ರಾಜಕಾರಿಣಿ ಎಂದವರು ತಮ್ಮ ಎದೆ ಮೇಲೆ ಕೈಯಿಟ್ಟು ಹೇಳಲಿ ಎಂದರು.