ಅಗ್ನಿಪರೀಕ್ಷೆ ಜಯಿಸಿದ ಉದ್ಧವ್ ಠಾಕ್ರೆ : ಸಭಾತ್ಯಾಗ ಮಾಡಿದ ಫಡ್ನವೀಸ್ – ರಾಜ್ಯಪಾಲರಿಗೆ ದೂರು
ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಮೊದಲ ಅಗ್ನಿಪರೀಕ್ಷೆಯಲ್ಲಿ ಜಯಿಸಿದ್ದಾರೆ. ಇದಕ್ಕೂ ಮುನ್ನ ಹಲವು ನಾಟಕೀಯ ಬೆಳವಣಿಗೆಗಳು ಮಹಾರಾಷ್ಟ್ರ ರಾಜಕಾರಣದಲ್ಲಿ ನಡೆದಿದೆ.
ಇಂದು ನಡೆದ ವಿಶ್ವಾಸ ಮತ ಪರೀಕ್ಷೆಯಲ್ಲಿ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಮೈತ್ರಿ ಸರ್ಕಾರ ಬಹುಮತ ಸಾಬೀತುಪಡಿಸಿತು. ಹಂಗಾಮಿ ಸ್ಪೀಕರ್ ಬದಲಾವಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯವರು ವಿಶ್ವಾಸ ಮತದಲ್ಲಿ ಪಾಲ್ಗೊಳ್ಳದೆ ಸದನದಿಂದ ವಾಕೌಟ್ ಮಾಡಿದರು. ಬಹುಮತ ಸಾಬೀತುಪಡಿಸಲು 145 ಸಂಖ್ಯೆ ಬೇಕಿತ್ತು. ಮಹಾ ವಿಕಾಸ್ ಆಘಾಡಿ ಮೈತ್ರಿ ಸರ್ಕಾರದ ಪರವಾಗಿ 169 ಮತಗಳು ಚಲಾವಣೆಯಾದವು.
ಎಸ್ಸಿಪಿ-ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ನಡೆಸಿರುವ ಶಿವಸೇನೆ ಶನಿವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಸಿದ್ದರಾದರು. ಇದಕ್ಕೂ ಮುನ್ನ ಶುಕ್ರವಾರ ಸದನದ ಹಂಗಾಮಿ ಸ್ಪೀಕರ್ ಆಗಿ ಎನ್ಸಿಪಿ ನಾಯಕ ದಿಲೀಪ್ ವಾಲ್ಸೆ ಪಾಟೀಲ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಠಾಕ್ರೆ ತಿಳಿಸಿದ್ದರು. ಆದರೆ, ಹಂಗಾಮಿ ಸ್ಪೀಕರ್ ಆಯ್ಕೆ ಅಕ್ರಮವಾಗಿದೆ. ಏಕಾಏಕಿ ಸ್ಪೀಕರ್ ಅವರ ಬದಲಾವಣೆ ಮಾಡಲಾಗಿದೆ. ಇದು ಸಂವಿಧಾನ ಬಾಹಿರ ಎಂದು ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಆರೋಪಿಸಿ, ಸದನದಿಂದ ವಾಕೌಟ್ ಮಾಡಿದರು. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲು ಕೂಡ ನಿರ್ಧಾರ ಮಾಡಿದ್ದಾರೆ.