11 ಗಂಟೆಗೆ ಹಾಸ್ಯ ನಟ ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ : ಕಂಬನಿ ಮಿಡಿದ ಸ್ಯಾಂಡಲ್ ವುಡ್
ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಗಲಿಕೆಯಿಂದ ಇಡೀ ನಂದನವನವೇ ಕಣ್ಣೀರಿಟ್ಟಿದೆ. ಕೊರೊನಾ ಹರಡುವ ಹಿನ್ನೆಲೆ ಜನ ಸೇರದಿರಲು ಸರ್ಕಾರ ಸೂಚಿಸಿದ್ದು, ಇದರಿಂದ ನೆಚ್ಚಿನ ನಟನ ಕೊನೆಯದಾಗಿ ನೋಡಲು ಕೂಡ ಅವಕಾಶ ಇಲ್ಲದೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
44 ವರ್ಷದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೆ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.
ಬುಲೆಟ್ ಪ್ರಕಾಶ್ ಅವರ ನಿಧನಕ್ಕೆ ಸ್ನೇಹಿತ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂತಾಪ ಸೂಚಿಸಿದ್ದಾರೆ. ಬುಲೆಟ್ ಪ್ರಕಾಶ್ ನಿಧನದ ಸುದ್ದಿ ತಿಳಿಯುತ್ತಲೇ ಅವರ ಕುಟುಂಬಸ್ಥರಿಗೆ ಕರೆ ಮಾಡಿದ ದರ್ಶನ್ ಸಾಂತ್ವನ ಹೇಳಿದ್ದು, ಕುಟುಂಬದವರ ಕಷ್ಟಕ್ಕೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬುಲೆಟ್ ಪ್ರಕಾಶ್ ಅವರ ಮಗಳ ಮದುವೆ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದರ್ಶನ್ ಪ್ರಾರ್ಥಿಸಿದ್ದಾರೆ.
ಹಾಸ್ಯ ಕಲಾವಿದರಾದ ಬುಲೆಟ್ ಪ್ರಕಾಶ್ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ pic.twitter.com/uY9Iz8WdNo
— Darshan Thoogudeepa (@dasadarshan) April 6, 2020
ಸ್ಯಾಂಡಲ್ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ನಿಧನಕ್ಕೆ ನಟ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದು, ಕೊನೆಯ ಬಾರಿಗೆ ಅವರನ್ನು ನೋಡಲು ಆಗಲಿಲ್ಲ ಎಂದು ಬೆಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ನನ್ನ ಸ್ನೇಹಿತ ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂದು ಕೇಳಿದಾಗ ಬೇಸರವಾಯಿತು. ಇನ್ನೂ ಹೆಚ್ಚು ದುಃಖಕರವಾದ ಸಂಗತಿಯೆಂದರೆ ಸಿನಿಮಾ ಉದ್ಯಮದ ಸ್ನೇಹಿತರು ಕೊನೆಯ ಬಾರಿಗೆ ಅವರನ್ನು ನೋಡಲು ಅವರ ಮನೆಗೆ ಭೇಟಿ ನೀಡಲು ಸಾಧ್ಯವಿಲ್ಲ. ಬಲೆಟ್ ಪ್ರಕಾಶ್ ಇದ್ದಲ್ಲಿ ನಗು ಇರುತ್ತಿತ್ತು. ಅವರೊಬ್ಬ ಅದ್ಭುತ ನಟ. ನನ್ನ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
https://twitter.com/KicchaSudeep/status/1247219079980572672
ಈಗಾಗಲೇ ಎಂಎಸ್ ರಾಮಯ್ಯ ಆಸ್ಪತ್ರೆಯ ಶವಾಗಾರಕ್ಕೆ ಬುಲೆಟ್ ಪ್ರಕಾಶ್ ಕುಟುಂಬ ಸದಸ್ಯರು ಹಾಗೂ ನಟ ದುನಿಯಾ ವಿಜಯ್ ಆಗಮಿಸಿ ಅವರ ಶವವನ್ನು ಪಡೆದುಕೊಂಡಿದ್ದಾರೆ. ಬುಲೆಟ್ ಪ್ರಕಾಶ್ ಪಾರ್ಥಿವ ಶರೀರವನ್ನು ಭುವನೇಶ್ವರಿ ನಗರದ ನಿವಾಸಕ್ಕೆ ಕೊಂಡೊಯ್ದು, ಇಂದು 11 ಗಂಟೆಗೆ ನಗರದ ಹೆಬ್ಬಾಳದಲ್ಲಿರುವ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.
ಕೊರೋನಾದಿಂದ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಪ್ರಕಾಶ್ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.