ಬೊಮ್ಮಾಯಿ ಸಂಪುಟದಲ್ಲಿ 29 ಸಚಿವರಿಗೆ ಸ್ಥಾನ : ಬಿವೈ ವಿಜಯೇಂದ್ರರಿಗಿಲ್ಲ ಮಂತ್ರಿಗಿರಿ…!
ಭಾರೀ ಕುತೂಹಲ ಮೂಡಿಸಿದ ಸಚಿವ ಸಂಪುಟ ರಚನೆಗೆ ಇಂದು ತೆರೆ ಬೀಳಲಿದ್ದು ಸಚಿವರ ಪಟ್ಟಿ ಬಿಡುಗಡೆಗೆ ಕೌಂಟಡೌನ್ ಶುರುವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಯಾವ ಸಮುದಾಯಕ್ಕೆ ಹೆಚ್ಚು ಆಧ್ಯತೆ ನೀಡಲಾಗಿದೆ ಎನ್ನುವ ಬಗ್ಗೆ ಬೊಮ್ಮಾಯಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ,” ಓರ್ವ ಮಹಿಳೆ, 3 ದಲಿತರು, 1 ಎಸ್ ಟಿ, 9 ಲಿಂಗಾಯತರು, 7 ಒಬಿಸಿ ಸಮುದಾಯದವರು ಸೇರಿದಂತೆ ಒಟ್ಟು 29 ಶಾಸಕರು ಸಚಿವ ಸ್ಥಾನ ಪಡೆದುಕೊಳ್ಳಲಿದ್ದಾರೆ. ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ” ಎಂದು ಸಿಎಂ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ ಇಂದೇ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಇನ್ನೂ ತಮ್ಮ ಸಚಿವರ ಪಟ್ಟಿಯಲ್ಲಿ ಬಿ ವೈ ವಿಜಯೇಂದ್ರ ಅವರ ಹೆಸರು ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ‘ಈ ಬಗ್ಗೆ ಬಿಜೆಪಿ ವರಿಷ್ಠರು ಯಡಿಯೂರಪ್ಪ, ವಿಜಯೇಂದ್ರ ಅವರ ಜೊತೆ ಮಾತನಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ. ನಾನು ಈಗ ಕಳುಹಿಸಿರುವ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರು ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.