ಹೊಸ ಸಂಚಾರ ನಿಯಮ : ಎಂಟು ದಿನದಲ್ಲಿ 2.40 ಕೋಟಿ ರೂ. ದಂಡ ವಸೂಲಿ…!
ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಘನೆಯ ದಂಡ ಪ್ರಮಾಣವನ್ನು ಸದ್ಯಕ್ಕೆ ಇಳಿಸುವ ಸೂಚನೆ ಇಲ್ಲದಂತೆ ಕಾಣುತ್ತಿದೆ.
ವಾಹನ ಸವಾರರು ರಾಜ್ಯದಲ್ಲಿ ಯಾವಾಗ ಟ್ರಾಫಿಕ್ ದಂಡವನ್ನು ಇಳಿಕೆಯಾಗುತ್ತೆ ಎಂದು ಕಾಯುತ್ತಿದ್ದಾರೆ. ಈಗಾಗಲೇ ದಂಡವನ್ನು ಕಟ್ಟಿರುವ ವಾಹನ ಸವಾರರು ಸಾಕಪ್ಪ… ಸಾಕು ಈ ದಂಡದ ಸವಾಸ ಎಂದು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ನಗರವೊಂದರಲ್ಲೇ ಕೇವಲ ಎಂಟು ದಿನಗಳ ಅವಧಿಯಲ್ಲಿ 84,589 ಪ್ರಕರಣಗಳು ದಾಖಲಾಗಿದ್ದು ಬರೋಬ್ಬರಿ 2.40 ಕೋಟಿ ಹಣ ದಂಡ ವಸೂಲಾಗಿದೆ. ಇದರಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದ 16,710 ಪ್ರಕರಣಗಳು ಆಗಿದೆ.
ಇನ್ನು ಬೈಕ್ ನ ಹಿಂಬದಿ ಸವಾರ ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಿದ್ದ ಸಂಬಂಧ 10,977 ಪ್ರಕರಣಗಳು ದಾಖಲಾ ಗಿವೆ. ನೋ ಪಾರ್ಕಿಂಗ್ 10,867 ಪ್ರಕರಣ, ಡ್ರಿಂಕ್ ಅಂಡ್ ಡ್ರೈವ್ ಅಡಿ 150 ಪ್ರಕರಣ ಮತ್ತು ಸಿಗ್ನಲ್ ಜಂಪ್ 10,128 ಪ್ರಕರಣಗಳು ದಾಖಲಾಗಿದೆ.
ಕೇಂದ್ರ ಮೋಟಾರು ವಾಹನ (ತಿದ್ದುಪಡಿ) ಮಸೂದೆಯ ಅನ್ವಯ ಜಾರಿಗೊಳಿಸಿದ ದಂಡ ಪ್ರಮಾಣದ ಬಗ್ಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮತ್ತೆ ಸರ್ಕಾರ ಪರಿಷ್ಕೃತ ದಂಡ ನಿಯಮವನ್ನು ಜಾರಿಗೆ ಬರುವ ತನಕ ಹಿಂದಿನ ನಿಯಮವೇ ಮುಂದುವರಿಯಲಿದೆ.