ರಾಜ್ಯದಲ್ಲಿ ಪ್ರಸ್ತುತ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಕಾರಣ ಕಾಂಗ್ರೇಸ್ ಮತ್ತು ಜೆ.ಡಿಎಸ್‌ನ ಹದಿನೇಳು ಶಾಸಕರು ಅಧಿಕಾರಕ್ಕಾಗಿ ರಾಜಿನಾಮೆ ನೀಡಿ ಅನರ್ಹತೆಯ ಪಟ್ಟಕಟ್ಟಿಕೊಂಡು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಈಗ ಬಿಜೆಪಿಯ ಅಭ್ಯರ್ಥಿಗಳಾಗಿ ಮತ್ತೆ ಅವರದೇ ಕ್ಷೇತ್ರಗಳಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಸರ್ಕಾರ ಬೀಳಿಸಿದ ಈ ಬೇಜವಾಬ್ದಾರಿ ಅನರ್ಹ ಶಾಸಕರು ಮತ್ತೆ ಚುನಾವಣೆಗೆ ನಿಂತಿರುವುದು ಕೆಲ ಜನಸಾಮಾನ್ಯರಿಗೆ ಪಿತ್ತನೆತ್ತಿಗೇರುವಂತೆ ಮಾಡಿದೆ. ಚುನಾವಣೆ ಎಂದರೆ ಸರ್ಕಾರದ ಬೊಕ್ಕಸದಿಂದ ಜನರ ಹಣ ಕೋಟಿ ಕೋಟಿ ಖರ್ಚಾಗುವ ಸಾಧ್ಯತೆಯಿದೆ. ಮಾದರಿ ಚುನಾವಣಾ ನೀತಿ ಸಂಹಿತೆಗಳು ಬಂದರೆ ಆ ಸಮಯದಲ್ಲಿ ತಿಂಗಳುಗಟ್ಟಲೆ ಜನರ ಸರ್ಕಾರಿ ಕೆಲಸಗಳೇ ನಡೆಯುವುದಿಲ್ಲ.

ಇಷ್ಟೆಲ್ಲಾ ಕಷ್ಟಗಳ ನಡುವೆ ಕೆಲ ಅನರ್ಹ ಶಾಸಕರ ’ಸ್ವಾಭಿಮಾನಕ್ಕಾಗಿ, ಕ್ಷೇತ್ರದ ಅಭಿವೃದ್ದಿಗಾಗಿ’ ಎಂಬಂತಹ ಬಂಡಲ್ ಮಾತುಗಳನ್ನು ಕೇಳಿಸಿಕೊಳ್ಳಬೇಕಾದೆ ಅನಿವಾರ್ಯತೆ ಜನರಿಗೆ ರೇಜಿಗೆ ಹುಟ್ಟಿಸಿದೆ. ಇದರಿಂದ ಕೋಪಗೊಂಡ ಕೆಲವರು ’ಜನರ ಕಷ್ಟಗಳನ್ನು ಪರಿಹರಿಸದೆ ಕೇವಲ ತಮ್ಮ ಹಣ ಅಧಿಕಾರದ ಸ್ವಾರ್ಥಕ್ಕಾಗಿ ರಾಜಿನಾಮೆ ನೀಡಿದ ಅನರ್ಹ ಶಾಸಕರಿಗ’ ಬೀದಿಗಳಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಮೊದಲಿಗೆ ಕೆ.ಆರ್ ಪೇಟೆಯಲ್ಲಿ ಅನರ್ಹ ಶಾಸಕ ನಾರಾಯಣಗೌಡ, ಸಚಿವ ಮಾಧುಸ್ವಾಮಿ ಮತ್ತು ಬಿಜೆಪಿ ಮುಖಂಡರಿಗೆ ಜನ ಚಪ್ಪಲಿ ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಳ್ಳ ಕಳ್ಳ ಎಂದು ಕೂಗಿದ್ದಾರೆ. ಜನರ ಸಿಟ್ಟಿಗೆ ಬೇಜಾರಾದ ನಾರಾಯಣಗೌಡರು ಮನೆಯಲ್ಲಿ ಬೇಕಾದರೆ ಹೊಡೆಯಿರಿ, ಬೀದಿಯಲ್ಲಿ ಬೇಡ ಎಂದು ಅವಲತ್ತುಕೊಳ್ಳುವ ಮಟ್ಟಕ್ಕೆ ಹೋಗಿದ್ದರು.

ಇನ್ನೊರ್ವ ಅನರ್ಹ ಶಾಸಕ ಹೆಚ್.ವಿಶ್ವನಾಥ್‌ರನ್ನು ಹುಣಸೂರು ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಲು ತೆರಳಿದ್ದಾಗ, ಅಲ್ಲಿನ ಕೆಲವರು “ನೀವು ನಮಗೆ ಮೋಸ ಮಾಡಿ ಹೋಗಿದ್ದೀರಿ. ಮತ್ತೆ ಮತಕೇಳಲು ಬಂದಿದ್ದೀರಿ ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿದರೂ ಸಹ ಬಿಡದ ಅವರು ಕೆಲವು ನಿಮಿಷಗಳ ಕಾಲ ವಿಶ್ವನಾಥ್‌ರವರಿಗೆ ಬೈಯ್ದುಬಿಟ್ಟಿದ್ದಾರೆ.

ವಿಡಿಯೋ ನೋಡಿ:

ಇನ್ನು ಶಿರಸಿ ಯಲ್ಲಾಪುರದ ಭಾಗದಲ್ಲಿ ಚುನಾವಣಾ ಪ್ರಚಾರ ಮಾಡಲು ಹೊರಟ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್‌ಗೆ ಕೂಡ ಅಲ್ಲಿನ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಭಾರಿ ಚುನಾವಣಾ ಪ್ರಚಾರಕ್ಕೆ ಬಂದಾಗ ಬಿಜೆಪಿಯವರ ಬಗ್ಗೆ ಬೈಯ್ದು ಮಾತಾಡಿದ್ದೀರಿ? ಏನು ಮಾತಾಡಿದ್ದಿರಿ ಎಂಬ ನೆನಿಪಿದೆಯೇ ನಿಮಗೆ? ಈಗ ಏನ್ ಹೇಳುತ್ತಿದ್ದೀರಿ? ಬಿಜೆಪಿ ಸೇರಿದ್ದು ಯಾಕೆ? ಎಲ್ಲಾ ನಿಮ್ಮ ಸ್ವಾರ್ಥಕ್ಕಾಗಿ ಎಂದು ಜನರು ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ವಿಡಿಯೋ ನೋಡಿ

ಹೀಗೆ ಜನ ಸಿಕ್ಕಸಿಕ್ಕಲ್ಲಿ ರಾಜಕಾರಣಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ನಾಳೆ ನಮ್ಮನ್ನು ಬೀದಿಯಲ್ಲಿ ಪ್ರಶ್ನೆ ಕೇಳುತ್ತಾರೆ ಎಂಬ ಭಯದಿಂದ ರಾಜಕಾರಣಿಗಳು ಮುಂದಾದರೂ ಬುದ್ದಿ ಕಲಿಯುತ್ತಾರಾ ನೋಡಬೇಕಿದೆ.