ಸಾವರ್ಕರ್ ಅವರಂಥ ಸ್ವಾತಂತ್ರ್ಯ ಹೋರಾಟಗಾರರ ಫಲ ನಾನು, ಸಿದ್ಧರಾಮಯ್ಯ ಉಣ್ಣುತ್ತಿದ್ದೇವೆ- ಎಚ್. ವಿಶ್ವನಾಥ ಆಕ್ರೋಶ
ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಹಳ್ಳಿಹಕ್ಕಿ, ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ವೀರ ಸಾವರ್ಕರ ಕುರಿತು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವೀರ ಸಾವರ್ಕರಗೆ ಭಾರತ ರತ್ನ ನೀಡುವ ಬಗ್ಗೆ ವಿವಾದ ಎದ್ದಿರುವುದು ವಿಷಾಧಕರ. ಸಾವರ್ಕರ ಮತ್ತು ಅವರ ಕುಟುಂಬದವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮಾಡಿದವರ ಪಟ್ಟಿಯಲ್ಲಿದ್ದಾರೆ. ನಾನು, ನನ್ನ ಕುಟುಂಬ ಮತ್ತು ಸಿದ್ಧರಾಮಯ್ಯ ಹಾಗೂ ಅವರ ಕುಟುಂಬದವರಾರೂ ಸ್ವಾತಂತ್ರ್ಯಕ್ಕಾಗಿ ಸತ್ತಿಲ್ಲ. ನಮ್ಮ ಆಸ್ತಿಯೂ ಹೋಗಿಲ್ಲ. ವೀರ ಸಾವರ್ಕರ ಅವರಂಥ ನಾಯಕರು ಹೋರಾಟ ನಡೆಸಿದ್ದರಿಂದ ಅದರ ಫಲವನ್ನು ನಾವು ಉಣ್ಣುತ್ತಿದ್ದೇವೆ ಎಂದು ಮಾಜಿ ಸಿಎಂಗೆ ಟಾಂಗ್ ನೀಡಿದ್ದಾರೆ.
ತಮ್ಮ ಕುರಿತು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮಾಡಿರುವ ಟೀಕೆಗೆ ಅಷ್ಟೇ ನಯವಾಗಿ ಉತ್ತರಿಸಿದ ಎಚ್. ವಿಶ್ವನಾಥ, ಮಾಜಿ ಮುಖ್ಯಮಂತ್ರಿಗಳು ದೊಡ್ಡವರು. ಸತ್ಯವಂತರು. ರಾಷ್ಟ್ರ ನಾಯಕರು. ಸ್ವಾತಂತ್ರ್ಯ ಪ್ರೇಮಿಗಳು. ಅವರ ಟೀಕೆಗೆ ಮೈಸೂರಿನಲ್ಲಿಯೇ ಉತ್ತರ ಕೊಡುತ್ತೇನೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ ತಿಳಿಸಿದರು.
ಸೋಮದೇವರ ಹಟ್ಟಿಯಲ್ಲಿ ವಿಶೇಷ ಪೂಜೆಗೆ ಆಗಮಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಗತಿಪರರಾದ ತಾವು ದೇವರಿಗೆ ಕೈ ಮುಗಿಯಬಾರದೇ? ದೇವರಿಗೆ ಕೈ ಮುಗಿಯುವುದು, ಹೋಮ ಹವನ ಮಾಡುವುದಯ ಬೇಡ ಅಂತ ಎಲ್ಲಿದೆ? ಶ್ರದ್ಧಾ ಭಕ್ತಿಯಿಂದ ದೇವರಿಗೆ ನಡೆದುಕೊಳ್ಳುವುದು ನಮ್ಮಲ್ಲಿ ಬಂದಿರುವ ಪದ್ಧತಿ ಎಂದು ತಿಳಿಸಿದರು.
ನಾಳೆ ಸುಪ್ರೀಂ ಕೋರ್ಟಿನಲ್ಲಿ ನಮ್ಮ ಪರ ತೀರ್ಪು ಬರುವ ನಂಬಿಕೆಯಿದೆ. ವಿಶ್ವಾಸವಿದೆ. ಏಕೆಂದರೆ ಅಂದಿನ ಸ್ಪೀಕರ ರಮೇಶಕುಮಾರ ಕಾನೂನು ಬಾಹಿರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿದ್ದೇವೆ. ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಎತ್ತಿ ಹಿಡಿಯುವ ವಿಶ್ವಾಸವಿದೆ. ಈಗ ತಿಕೋಟಾದಲ್ಲಿ ಸ್ನೇಹಿತರೊಬ್ಬರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ತಿಕೋಟಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತೇನೆ. ತೀರ್ಪು ನಾಳೆ ಬರುತ್ತೋ ಅಥವಾ ಯಾವಾಗ ಬರುತ್ತೋ ಎಂಬುದು ಗೊತ್ತಿಲ್ಲ ಎಂದು ಜೆಡಿಎಸ್ ಅನರ್ಹ ಶಾಕ ಎಚ್. ವಿಶ್ವನಾಥ ತಿಳಿಸಿದರು.