ಸಕ್ಕರೆನಾಡಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಫ್ಲ್ಯಾನ್…..
ಸಕ್ಕರೆನಾಡು ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಮಾಸ್ಟರ್ ಫ್ಲ್ಯಾನ್ ಮಾಡಿದೆ.
ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ಕರೆನಾಡಿನ ಅನರ್ಹ ಶಾಸಕ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅನರ್ಹ ಶಾಸಕ ನಾರಾಯಣಗೌಡ ಮನವಿ ಮೇರೆಗೆ ಕೆ.ಆರ್.ಪೇಟೆ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಿಂದ ಅನುದಾನ ನೀಡಲಾಗಿದೆ.
ಹೌದು… ಅನುದಾನ ನೀಡುವಲ್ಲಿ ತಾರತಮ್ಯ, ಮೈತ್ರಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಕುಂಠಿತ ಕಾರಣ ನೀಡಿ ನಾರಾಯಣಗೌಡ ರಾಜಿನಾಮೆ ನೀಡಿದ್ದರು. ಸದ್ಯ ಈ ಬಗ್ಗೆ ಬಿಎಸ್ವೈ ಸರ್ಕಾರಕ್ಕೆ ಮನವಿ ಸಲ್ಲಿಸಿ ಅನುದಾನ ಬಿಡುಗಡೆಗೆ ಅನುಮೋದನೆ ಪಡೆದಿದ್ದಾರೆ.
ರಾಜಿನಾಮೆ ಬಳಿಕ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡ್ತಿಲ್ಲ ಎಂದು ಆರೋಪಿಸಿದ್ದ ನಾರಾಯಣಗೌಡಗೆ ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ 33.70 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆಯ ಆದೇಶ ಪ್ರತಿ ವೈರಲ್ ಮಾಡ್ತಿರೋ ನಾರಾಯಣಗೌಡ ಬೆಂಬಲಿಗರು, ಆದೇಶ ಪ್ರತಿ ವೈರಲ್ ಮಾಡೋ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ನಾರಾಯಣಗೌಡರು ರಾಜಿನಾಮೆ ಕೊಟ್ಟಿದ್ದು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಎಂದು ಈಗಲಾದರೂ ತಿಳಿದುಕೊಳ್ಳಿ ಎನ್ನುವ ಕಾರಣಕ್ಕೆ ಈ ರೀತಿ ನಡೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.