ವಿದ್ಯಾರ್ಥಿಗಳಿಗೆ ಜೀವನದ ಪಾಠ ಹೇಳಿದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್….

ಶಾಲಾ ಕಾಲೇಜ್ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಆತ್ಮಸ್ಥೈರ್ಯವನ್ನು ತುಂಬಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗಕ್ಕೆ ಹೆಚ್ಚು ಮಹತ್ವ ನೀಡುವುದಿಲ್ಲ. ಬದಲಾಗಿ ಶೈಕ್ಷಣಿಕವಾಗಿ ಗರಿಷ್ಠ ಅಂಕ ಪಡೆಯಬೇಕು ಅನ್ನೋ ರೀತಿಯ ಶಿಕ್ಷಣವನ್ನು ನೀಡಲಾಗುತ್ತದೆ. ಇದ್ರಿಂದ ವಿದ್ಯಾಭ್ಯಾಸ ಮುಗಿದ ನಂತರ ವಿದ್ಯಾರ್ಥಿಗಳು ಉದ್ಯೋಗದ ಬಗ್ಗೆ ಆತಂಕಕ್ಕಿಡಾಗುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಹೇಳಿದ್ರು.

ಬೆಂಗಳೂರು ಬಂಟರ ಸಂಘ ಏರ್ಪಡಿಸಿದ್ದ ಸಂಪರ್ಕ -2019 ಕಾರ್ಯಕ್ರಮವನ್ನು ಉದ್ಥಾಟಿಸಿ ಮಾತನಾಡಿದ ಬೆಂಗಳೂರು ಪೋಲಿಸ್ ಆಯುಕ್ತರಾದ ಭಾಸ್ಕರ್ ರಾವ್, ನಮ್ಮಲ್ಲಿ ಜನರ ಕೊರತೆ ಇಲ್ಲ. ಆದ್ರೆ ಮಾನವ ಸಂಪನ್ಮೂಲದ ಕೊರತೆ ಇದೆ ಎಂದು ಹೇಳಿದ್ರು. ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಉದ್ಯೋಗದ ಬಗ್ಗೆಯೂ ತಿಳುವಳಿಕೆಯನ್ನು ನೀಡಬೇಕು. ಮಾನವ ಸಂಪನ್ಮೂಲ ಮತ್ತು ವಿದ್ಯಾರ್ಜನೆಯಲ್ಲಿ ಗುಣಮಟ್ಟ ಬಹಳ ಮಹತ್ತರವಾದ ಪಾತ್ರ ವಹಿಸುತ್ತದೆ. ಪಠ್ಯ ವಿಷಯಗಳಲ್ಲಿ ಶೇ.95ರಷ್ಟು ಅಂಕ ಪಡೆದು ಸರಿಯಾದ ಉದ್ಯೋಗ ಸಿಗದಿದ್ದಾಗ ಬಹಳಷ್ಟು ಮಂದಿ ಖಿನ್ನತೆಗೆ ಒಳಗಾಗುತ್ತಾರೆ. ಇದ್ರಿಂದ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತವೆ. ಹೀಗಾಗಿ ಶಾಲಾ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕು. ಅಲ್ಲದೆ ವೃತ್ತಿಪರ ಕೌಶಲ್ಯತೆಗಳ ಬಗ್ಗೆ ತರಬೇತಿ ನೀಡಬೇಕು ಎಂದು ಹೇಳಿದ್ರು.

ಬೆಂಗಳೂರು ಬಂಟರ ಸಂಘ, ಸಂಪರ್ಕ 2019ರ ಕಾರ್ಯಕ್ರಮದ ಮೂಲಕ ಮಾನವ ಸಂಪನ್ಮೂಲ ಕ್ರೂಢಿಕರಿಸಿ ಬಲವರ್ಧನೆ ಮಾಡುವುದರ ಜೊತೆಗೆ ಸಮುದಾಯದ ಕಿರಿಯರಿಗೆ ಉದ್ಯೋಗ ಅವಕಾಶಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಆಭಿಪ್ರಾಯಪಟ್ಟರು.

ಇನ್ನು ಬಂಟ ಸಮುದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರು ಪೊಲೀಸ್ ಆಯುಕ್ತರು, ಹಲವಾರು ವಲಯಗಳಲ್ಲಿ ಗುರುತಿಸಿಕೊಂಡಿರುವ ಬಂಟ ಸಮುದಾಯದವರು ಪ್ರಪಂಚದ ಯಾವುದೇ ಮೂಲೆಗೆ ಹೋದ್ರೂ ಕಾಣ ಸಿಗುತ್ತಾರೆ. ಸಮುದಾಯ ಬೆಳೆಯುವುದರ ಜೊತೆಗೆ ಇತರರಿಗೂ ಅವಕಾಶ ನೀಡಿ ಬೆಳೆಸುವಂತಹ ಗುಣ ಅವರಲ್ಲಿದೆ. ನಾನು ನೋಡಿದ ಹಾಗೇ ಜೈನರು, ಸಿಖ್ಖರು ಹಾಗೂ ಬಂಟ ಸಮುದಾಯದವರು ಯಾರಿಗೂ ತಲೆಬಾಗುವುದಿಲ್ಲ. ಸ್ವಾಭಿಮಾನಿಗಳಾಗಿ ಜೀವನ ಸಾಗಿಸುತ್ತಾರೆ ಎಂದು ಹೇಳಿದ್ರು.

ಮಂಗಳೂರು ಜನರು ಯಾರ ಕೈಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುವುದಿಲ್ಲ. ಬದಲಿಗೆ ತಮ್ಮ ಅಡಿಯಲ್ಲಿ ಜನರು ಕೆಲಸ ಕೇಳಿಕೊಂಡು ಬರುವ ಹಾಗೇ ಮಾಡುತ್ತಾರೆ. ಅಷ್ಟೇ ಅಲ್ಲ, ಸರ್ಕಾರಿ ಕೆಲಸಕ್ಕೆ ಬರುವವರ ಸಂಖ್ಯೆ ತುಂಬಾ ಕಮ್ಮಿಯಾಗಿದೆ. ಅದ್ರಲ್ಲೂ ಪೊಲೀಸ್ ಇಲಾಖೆಗೆ ಕರಾವಳಿ ಜನರು ಸೇರುತ್ತಿಲ್ಲ. ಹೀಗಾಗಿ ನಾವು ಉತ್ತರ ಕರ್ನಾಟಕದವರಿಗೆ ತುಳು ಕ್ಲಾಸ್ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ವಹಿಸಿದ್ದರು. ಮುಖ್ಯ ಆತಿಥಿಯಾಗಿ ಲುಮೇನ್ಸ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಸಿ. ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ಕಾರ್ಯದರ್ಶಿ ಮಧುಕರ ಶೆಟ್ಟಿ, ಬಂಟರ ಸಂಘದ ಮಾನವ ಸಂಪನ್ಮೂಲ ವಿಭಾಗದ ಮುಖಸ್ಥೆ ಸುರೇಖಾ ಶೆಟ್ಟಿ ಉಪಸ್ಥಿತರಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights