ರಾಜ್ಯದ ವಿವಿಧೆಡೆ ಅಸ್ಪೃಶ್ಯತೆ ಆಚರಣೆ ಖಂಡಿಸಿ ಪಂಜಿನ ಮೆರವಣಿಗೆ….
ಚಿತ್ರದುರ್ಗ ಸಂಸದ ಎ.ನಾರಸಯಣಸ್ವಾಮಿ ದಲಿತ ಎನ್ನುವ ಕಾರಣಕ್ಕೆ ಗ್ರಾಮಪ್ರವೇಶಕ್ಕೆ ನಿರಾಕರಣೆ ಪ್ರಕರಣದೊಂದಿಗೆ ರಾಜ್ಯದ ವಿವಿಧೆಡೆ ಅಸ್ಪೃಶ್ಯತೆ ಆಚರಣೆ ಖಂಡಿಸಿ ಪಂಜಿನ ಮೆರವಣಿಗೆ ಮಾಡಲಾಯ್ತು.
ದಲಿತ ಎನ್ನುವ ಕಾರಣಕ್ಕೆ ಜನಪ್ರತಿನಿಧಿಯನ್ನೇ ದೂರ ಇಡುವ ವ್ಯವಸ್ಥೆ ಇದೆ. ಸಂಸದರ ಗ್ರಾಮ ಪ್ರವೇಶ ನಿರಾಕರಣೆ ಖಂಡಿಸಿ ಕೊಪ್ಪಳದಲ್ಲಿ ಮಾದಿಗ ಮಹಾಸಭಾ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರು. ನಗರದ ಪ್ರಮುಖ ಬೀದಿಗಳಲ್ಲಿ ದಲಿತ ಮುಖಂಡರು ಪಂಜಿನ ಮೆರವಣಿಗೆ ನಡೆಸಿದರು.
ಕಳೆದ ಒಂದು ವರ್ಷದಿಂದ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ತಮಿಳುನಾಡಿನಲ್ಲಿ ಅಂಬೇಡ್ಕರ್ ಮೂರ್ತಿಯನ್ನ ಒಡೆದು ಅವಮಾನ ಮಾಡಲಾಗಿದೆ. ಗುಜರಾತ್ನಲ್ಲಿ ಕುದುರೆ ಸವಾರಿ ಮಾಡಿದ ಕಾರಣಕ್ಕೆ ದಲಿತ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ ಪ್ರಕರಣ ಖಂಡನೀಯ. ಇಂಥ ಹಲವು ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಸಂಸದರಿಗೆ ಗ್ರಾಮ ಪ್ರವೇಶ ನಿರಾಕರಣೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮದಲ್ಲಿ ಇಂಥ ಪ್ರಕರಣಗಳು ಬಂದ ಕೂಡಲೇ ದಲಿತರು ಬೀದಿಗಿಳಿಯಬೇಕು ಎಂದು ಕರೆ ನೀಡಿದ ಮಾದಿಗ ಮಹಾಸಭಾದ ಕುಷ್ಟಗಿ ತಾಲೂಕಾಧ್ಯಕ್ಷ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಇನ್ನೂರಕ್ಕೂ ಅಧಿಕ ಜನ ದಲಿತರು ಪಂಜಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.