ಯಡಿಯೂರಪ್ಪ ಸಿಎಂ ಆಗಲು ಸಿದ್ದರಾಮಯ್ಯ ಕುಮಾರಸ್ವಾಮಿ ಕಾರಣ..!
ಯಡಿಯೂರಪ್ಪ ಸಿಎಂ ಆಗಲು ಸಿದ್ದರಾಮಯ್ಯ ಕುಮಾರಸ್ವಾಮಿ ಕಾರಣ. ಇದನ್ನ ಸ್ವತಃ ಅವರಿಬ್ಬರೆ ಒಪ್ಪಿಕೊಂಡಿದ್ದಾರೆ. ಇದಕ್ಕೆ 17 ಜನ ಅನರ್ಹ ಶಾಸಕರು ಕಾರಣರಲ್ಲ ಎಂದು ಮೈಸೂರಿನಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ನಮ್ಮ ಮೇಲೆ ಸರ್ಕಾರ ಬೀಳಿಸಿದ ಗೂಬೆ ಕೂರಿಸಿದ್ದಿರಿ ಇಷ್ಟು ದಿನ. ಈಗ ನಿಮ್ಮ ಮಾತಿನ ಮೂಲಕ ಸರ್ಕಾರ ಪತನಕ್ಕೆ ನೀವೆ ಕಾರಣ ಎಂಬುದು ಸ್ಪಷ್ಟವಾಗಿದೆ. ಪರಸ್ಪರ ಅಸಮಾಧಾನ ಅಪನಂಬಿಕೆಯಲ್ಲಿ ಸರ್ಕಾರ ನಡೆಸಿದವರು ನೀವು.
ಅದರ ಪರಿಣಾಮ ಸರಕಾರ ಪತನವಾಯಿತು. ಈಗ ನೀವು ಹದ್ದು ಗಿಣಿ ಎಂಬ ಟೀಕೆ ಮಾಡಿಕೊಳ್ಳುತ್ತಿದ್ದೀರಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣ ಸಿದ್ದರಾಮಯ್ಯ, ಕುಮಾರಸ್ವಾಮಿ. ಕುಮಾರಸ್ವಾಮಿಯೇ ತಮ್ಮದು ಕೆಟ್ಟ ಸರ್ಕಾರ ಎಂದು ಹೇಳಿದ್ದಾರೆ.ನಾವು ಅದನ್ನೆ ಹೇಳಿಯೇ ಸರ್ಕಾರದಿಂದ ಹೊರ ಬಂದಿದ್ದು. ಈಗ ಅದನ್ನು ನೀವೆ ಖಚಿತ ಪಡಿಸುತ್ತಿದ್ದೀರಿ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮಾಜಿ ಸಚಿವ ರೇವಣ್ಣರನ್ನ ಹೊಗಳಿ ಜೊತೆಗೆ ಟಾಂಗ್ ಕೊಟ್ಟ ಹೆಚ್.ವಿಶ್ವನಾಥ್, ಅವರು ಕೆಲಸ ಮಾಡುವುದರಲ್ಲಿ ದೈತ್ಯರು. ಅವರ ಕೆಲಸದ ಬಗ್ಗೆ ಯಾವುದೇ ಅನುಮಾನ ಬೇಡ. ಯಾವುದೇ ಖಾತೆ ಇದ್ರು ಅದನ್ನ ಮಾಡುತ್ತಾರೆ. ಜತೆಗೆ ಎಲ್ಲಾ ಖಾತೆಗು ಕೈಯಾಡಿಸುತ್ತಾರೆ ಎಂದಿದ್ದಾರೆ.