ಮೂರು ಡಿಸಿಎಂ ನೇಮಕ : ರಾಜ್ಯ ಬಿಜೆಪಿ ಬುಡಕ್ಕೆ ಬೆಂಕಿ ಇಟ್ಟ ಹೈಕಮಾಂಡ್..!
ರಾಜ್ಯಕ್ಕೆ ಮೂವರು ಡಿಸಿಎಂಗಳನ್ನು ಕರುಣಿಸಿರುವ ಹೈಕಮಾಂಡ್ ಕ್ರಮಕ್ಕೆ ರಾಜ್ಯ ಬಿಜೆಪಿಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲಿಯೂ ಸೋತವರ (ಸವದಿ) ತಲೆಗೆ ಅಧಿಕಾರದ ಮುಕುಟ ತೊಡಿಸಿರುವುದು ಹಲವರಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪಡಿಣಮಿಸಿದೆ.
ಸಂಪುಟ ರಚನೆಯಾಗಿ ಒಂದು ವಾರದ ನಂತರ ಖಾತೆ ಹಂಚಿಕೆ ನಡೆದು ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರುನ್ನು ಉಪ ಮುಖ್ಯಮಂತ್ರಿಗಳನ್ನಾಗಿ ನೇಮಿಸಲಾಗಿದೆ.
ಇದು ನಿರೀಕ್ಷೆಯಂತೆಯೇ ಬಿಜೆಪಿಯಲ್ಲಿ ಅಸಮಧಾನದ ಕೊಳ್ಳಿಗೆ ತುಪ್ಪ ಸುರಿದಿದೆ. ಖಾತೆ ಹಂಚಿಕೆ ಬೆನ್ನಲ್ಲಿಯೇ ಹಿರಿಯ ಮಂತ್ರಿ ಸಿಟಿ ರವಿ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದೇ ಅಲ್ಲದೇ ರಾಜೀನಾಮೆಗೂ ಮುಂದಾಗಿದ್ದರು.
ಇದೇ ವೇಳೆ ಡಿಸಿಎಂ ಹುದ್ದೆ ಆಕಾಂಕ್ಷಿಯಾಗಿದ್ದ ಶ್ರೀರಾಮುಲು ಸಹ ತೀವ್ರ ಅಸಮಾಧಾನಗೊಂಡಿದ್ದು ಸರಕಾರಿ ಕಾರು ಬೇಡೆಂದು ಖಾಸಗಿ ಕಾರಿನಲ್ಲಿ ಸಂಚರಿಸುತ್ತಿದ್ದಾರೆ. ಅಲ್ಲದೇ ಬಳ್ಳಾರಿ, ಕೊಪ್ಪಳದಲ್ಲಿ ಶ್ರೀರಾಮುಲು ಬೆಂಬಲಿಗರು ರಸ್ತೆಗಿಳಿದು ವ್ಯಾಪಕ ಪ್ರತಿಭಟನೆ ನಡೆಸಿದ್ದು, ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಈಗ ಹಲವು ಹಿರಿಯ ನಾಯಕರು ಹೈಕಮಾಂಡ್ ನಡೆ ವಿರುದ್ಧ ದನಿ ಎತ್ತಿದ್ದಾರೆ. ಸಂಸದ ಶ್ರೀನಿವಾಸ ಪ್ರಸಾದ್, ಶಾಸಕರಾದ ರಾಮದಾಸ್, ಸೋಮಲಿಂಗಪ್ಪ ಅವರು ಮೂವರು ಡಿಸಿಎಂಗಳ ನೇಮಕ, ಅದರಲ್ಲಿಯೂ ಚುನಾವಣೆಯಲ್ಲಿ ಸೋತ ಸವದಿಯವರನ್ನು ಡಿಸಿಎಂ ಮಾಡಿರುವುದನ್ನೂ ಖಂಡಿಸಿದ್ದಾರೆ.
ಮೂರು ಮೂರು ಜನ ಉಪ ಮುಖ್ಯ ಮಂತ್ರಿಗಳು ಬೇಕಾಗಿರಲಿಲ್ಲ. ಸಂವಿಧಾನದಲ್ಲಿಯೇ ಉಪಮುಖ್ಯಂತ್ರಿಗಳು ಮಾಡುವ ವಿಚಾರವೇ ಇಲ್ಲ. .
ಬಿಜೆಪಿ ಹೈ ಕಮಾಂಡ್ ಈ ತೀರ್ಮಾನ ಮಾಡಿದ್ದರು ನಾನು ವಿರೋಧ ಮಾಡ್ತಿನಿ ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಜನ ಬಿಜೆಪಿಗೆ ಬಹುಮತ ಕೊಟ್ಟಿರಲಿಲ್ಲ ಅಂಥದ್ರಲ್ಲೂ ಸರ್ಕಾರ ರಚನೆ ಮಾಡಿದ್ದಿರಿ. ಆದರೆ ಈ ರೀತಿಯಲ್ಲಿ ಕಚ್ಚಾಟ ಮಾಡೋದು ಸರಿಯಲ್ಲ. ನಾನು ಏನಾದ್ರೂ ಹೇಳಕ್ಕೋ ಹೋದ್ರೆ ಯಾರು ಕೇಳ್ತಾರೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.