ಮಹಾರಾಷ್ಟ್ರಕ್ಕೆ 4 ಟಿಎಂಸಿ ನೀರು – ರಾಜಕೀಯ ಗಿಮಿಕ್ ಅಲ್ಲ – ಯಡಿಯೂರಪ್ಪ
ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ತುಬ್ಸಿ ಏತ ನೀರಾವರಿ ಯೋಜನೆ ಮೂಲಕ ಮಹಾರಾಷ್ಟ್ರದ ಬೋರ್ಚಿ ನದಿಗೆ ನೀರು ಬಿಡೋದಾಗಿ ನೀಡಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಚುನಾವಣಾ ಪ್ರಚಾರ ಮುಗಿಸಿಕೊಂಡು ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜಕೀಯ ಗಿಮಿಕ್ ಗಾಗಿ ಈ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ಬೇಸಿಗೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗೆ 4 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಅದಕ್ಕೆ ಪ್ರತಿಯಾಗಿ ತುಬ್ಸಿ ಏತ ನೀರಾವರಿ ಮೂಲಕ ಬೋರ್ಚಿ ನದಿಗೆ 4 ಟಿಎಂಸಿ ನೀರು ಬಿಡೋ ಬಗ್ಗೆ ಚರ್ಚೆ ಮಾಡಿದ್ದೇವೆ. ಆದರೆ ಇದು ಚರ್ಚೆಯ ಹಂತದಲ್ಲಿದೆ. ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿದ್ದೇನೆಂದು ರಾಜಕೀಕರಣ ಮಾಡಬಾರದು. ಇದು ಚುನಾವಣಾ ಗಿಮಿಕ್ ಅಲ್ಲ, ನನ್ನ ಜೀವನದಲ್ಲಿ ಚುನಾವಣಾ ಗಿಮಿಕ್ ಮಾಡಿ ಅಭ್ಯಾಸವಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಯಡಿಯೂರಪ್ಪ ಹರಿಹಾಯ್ದರು. ಮಹಾರಾಷ್ಟ್ರದವರು, ನಾವು ದಾಯಾದಿಗಳಲ್ಲ. ಪರಸ್ಪರ ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ತೇವೆ. ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸೋದು ಬೇಡವೆಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬಿಜೆಪಿ ಸರ್ಕಾರಕ್ಕೆ ಯಾವುದೆ ಕಷ್ಟ ಇಲ್ಲ, ಸಮಸ್ಯೆ ಇಲ್ಲ. ಎಲ್ಲರ ಸಹಕಾರವಿದ್ದು, ನಮ್ಮ ಅವಧಿ ಪೂರ್ಣ ಮಾಡ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಬೇಕು ಅದೆಲ್ಲಾ ಮಾಡ್ತೇವೆ. ನೆರೆ ಪರಿಹಾರದಲ್ಲಿ ಸಿಲುಕಿಕೊಂಡವರಿಗೆ ಪರಿಹಾರ ಕೊಟ್ಟಿದ್ದಿವೆ, ಮುಂದೆನೂ ಕೊಡ್ತೇವೆ. ಇಷ್ಟೆಲ್ಲಾ ಕಷ್ಟಗಳ ಮಧ್ಯೆಯೂ ಗಾಣಗಾಪುರಕ್ಕೆ ಹತ್ತು ಕೋಟಿ ಕೊಟ್ಟಿದ್ದೇವೆ.
ಸದ್ಯಕ್ಕೆ ನಮ್ಮ ಮುಂದೆ ಯಾವ ಹೊಸ ತಾಲ್ಲೂಕು ಅಥವಾ ಜಿಲ್ಲೆ ಮಾಡುವ ಯೋಚನೆ ಇಲ್ಲ. ಸಾರಾ ಮಹೇಶ್ ವಿಶ್ವನಾಥ್ ಆಣೆ ಪ್ರಮಾಣ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನ್ಯಾಕೆ ಮಾತಾಡಲ್ಲ ಎಂದರು. ಮಹಾರಾಷ್ಟ್ರ ಚುನಾವಣೆ ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಪರ ಅಲೆಯಿದ್ದು, ಟೂ ಥರ್ಡ್ ಮೆಜಾರಿಟಿಯಿಂದ ಮತ್ತೊಮ್ಮೆ ಅಧಿಕಕಾರಕ್ಕೆ ಬರ್ತೇವೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.