‘ಮನೆಮನೆಗೆ ಮದ್ಯ, ಇದು ವಿವೇಕ ಅಥವ ಅವಿವೇಕದ ಹೇಳಿಕೆಯೋ ನಾಗೇಶರನ್ನೇ ಕೇಳಬೇಕು’
ಮನೆಮನೆಗೆ ಮದ್ಯ ವಿತರಣೆ ಯೋಜನೆ ಬಗ್ಗೆ ಅಬಕಾರಿ ಸಚಿವ ಎಚ್.ನಾಗೇಶ ಅವರ ಹೇಳಿಕೆಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ. ಮದ್ಯ ಮುಕ್ತ, ವ್ಯಸನ ಮುಕ್ತ ರಾಜ್ಯ ಮಾಡಲು ಸಿಎಂಗೆ ಒತ್ತಾಯ ಹೇರಲಾಗುತ್ತಿದೆ. ಸದ್ಯ ನಾಗೇಶ್ ವಿರುದ್ಧ ಕೋಲಾರದಲ್ಲಿ ಬಿಜೆಪಿ ಎಂಎಲ್ ಸಿ ವೈ.ಎ.ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ನಾನು ಹೋಂ ಡೆಲಿವರಿ ಮದ್ಯ ವ್ಯವಸ್ಥೆಯನ್ನು ವಿರೋಧಿಸುತ್ತೇನೆ ಎಂದಿದ್ದಾರೆ. ಸಮಾಜದ ಮೇಲಿನ ದುಷ್ಪರಿಣಾಮಗಳ ಅರಿತು ಯೋಜನೆಗಳ ಬಗ್ಗೆ ಮಾತಾಡಬೇಕು. ಜನರ ಬದುಕು ಮುಖ್ಯ, ಸೋರಿಕೆಗಳನ್ನು ತಡೆಗಟ್ಟಿ ಸರ್ಕಾರಕ್ಕೆ ಆದಾಯ ತರಲು ಕ್ರಮವಹಿಸಬೇಕು. ವಿವೇಕ ಅಥವ ಅವಿವೇಕದ ಹೇಳಿಕೆಯೋ ಅವರನ್ನು ಕೇಳಬೇಕು ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿದ ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ, ಮನೆ ಬಾಗಿಲಿಗೆ ಮದ್ಯ ಕೊಟ್ರೆ ಜನ ಮೇಲೆ ಏದ್ದೇಳೋದೆ ಇಲ್ಲ. ಅಬಕಾರಿ ಸಚಿವ ಎಚ್.ನಾಗೇಶ ಚಿಂತನೆ ಸರಿಯಿಲ್ಲ. ಮದ್ಯ ಸೇವನೆ ತಗ್ಗಿಸಬೇಕು ಅನ್ನೋದು ಬಿಜೆಪಿಯ ಉದ್ದೇಶವಾಗಿದೆ. ಹೊಸದಾಗಿ ಸಚಿವರಾಗಿ ನಾಗೇಶ್ ಬಾಯಿ ತಪ್ಪಿ ಏನೋ ಮಾತಾಡಿದ್ದಾರೆ.
ಈಗಲೇ ಆ ಹೇಳಿಕೆಯ ಬಗ್ಗೆ ಸಚಿವರು ಸ್ಪಷ್ಟ ಮಾಡ್ತಾರೆ. ಸರ್ಕಾರ ಆದಾಯ ಹೆಚ್ಚಿಸಲು ಬೇರೆ ಕ್ರಮಗಳು ಇವೆ. ಮನೆ ಬಾಗಿಲಿಗೆ ಮಧ್ಯ ಸರಬರಾಜು ಮಾಡುವ ಚಿಂತನೆ ನಡೆಸಿರುವುದಾಗಿ ಅಬಕಾರಿ ಸಚಿವ ಎಚ್ ನಾಗೇಶ್ ಹೇಳಿದ್ರು ಎಂದು ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸಂಸದ ಎಸ್ ಮುನಿಸ್ವಾಮಿ ಹೇಳಿದರು.
ಮನೆ ಮನೆಗೆ ಮದ್ಯ ಸರಬರಾಜು-ಅಬಕಾರಿ ಸಚಿವ ನಾಗೇಶ್ ಚಿಂತನೆ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಇಟ್ ಈಸ್ ಎ ಫೂಲೀಶ್ ಥಿಂಕಿಂಗ್ ಎಂದು ಗರಂ ಆದ್ರು.