ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಸರಕಾರಿ ಬಸ್ ಪಲ್ಟಿ : ಓರ್ವ ಬಾಲಕ ಸಾವು – 20 ಜನರಿಗೆ ಗಾಯ
ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಸರಕಾರಿ ಬಸ್ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬಳಗಾನೂರ ಗ್ರಾಮದ ಬಳಿ ನಡೆದಿದೆ.ಘಟನೆಯಲ್ಲಿ ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 20 ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
ವಿಜಯಪುರದಿಂದ ತಾಳಿಕೋಟಿಗೆ ಆಗಮಿಸುತ್ತಿದ್ದ ಕೆ.ಎ.28/ಎಫ್-2087 ನಂಬರಿನ ಸರಕಾರಿ ಬಸ್ಸು, ಎಕ್ಸಲ್ ಸುಪರ್ ಬೈಕ್ ನಲ್ಲಿ ಹೊರಟ್ಟಿದ್ದ ಇಬ್ಬರು ಬಾಲಕರು ರಸ್ತೆ ಮದ್ಯೆ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋದ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಬಸ್ ಪಲ್ಟಿಯಾಗಿದೆ. ಬಸ್ಸಿನ ಗಾಲಿಯೊಳಗೆ ಸಿಲುಕಿದ ಇಬ್ಬರ ಪೈಕಿ ಓರ್ವ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಬೈಕ್ ನಲ್ಲಿದ್ದವರು ಢವಳಗಿ ಗ್ರಾಮದ ಇಬ್ಬರು ಬಾಲಕರು ಸಹೋದರರು. ಇವರಲ್ಲಿ ಬಾಲಕ ಬೀರಣ್ಣ ಪರದಾನಿ ಬೀರಗುಂಡ(೧೫) ಸಾವನ್ನಪ್ಪಿದ ದುರ್ದೈವಿ.
ಢವಳಗಿಯಿಂದ ಕೊಣ್ಣೂರ ಗ್ರಾಮದಲ್ಲಿರುವ ಸಹೋದರಿಯನ್ನು ಕರೆದುಕೊಂಡು ಹೋಗಲು ಬರುವಾಗ ನಡೆದ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿದ್ದ ಸುಮಾರು ೧೦ ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳಿಗೆ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕೀತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ತಾಳಿಕೋಟಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.