ನಿಮ್ಮ ಮತ ಪ್ರಜಾಪ್ರಭುತ್ವಕ್ಕೆ ಗೌರವ ತರಲಿ: ಡಿಕೆ ಶಿವಕುಮಾರ್
ಈ ಬಾರಿ ಉಪಚುನಾವಣೆಯಲ್ಲಿ ಪ್ರಜಾಪ್ರಭುತ್ವಕ್ಕೆ ಗೌರವ ತರುವಂತೆ ಮತದಾರರು ತಮ್ಮ ಮತ ಚಲಾವಣೆ ಮಾಡಬೇಕು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಹುಣಸೂರಿನ ಎಮ್ಮೆಕೊಪ್ಪಲುವಿನಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರ ಪ್ರಚಾರ ಮಾಡಿದ ಡಿಕೆ ಶಿವಕುಮಾರ್, ‘ತಮ್ಮ ಪಕ್ಷದ ಅಭ್ಯರ್ಥಿಗೆ ಮತಹಾಕಿ ಅನರ್ಹರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಕರೆ ನೀಡಿದರು.
ಎಲ್ಲರಿಗೂ ನನ್ನ ಕೋಟಿ ನಮಸ್ಕಾರ ಸಲ್ಲಿಸಲು ಇಚ್ಚಿಸುತ್ತೇನೆ. ಈಗ ನಾನು ಎಲ್ಲ ಕ್ಷೇತ್ರಗಳಿಗೂ ಹೋಗಬೇಕಿದೆ. ಇವತ್ತು ನಿಮ್ಮ ಊರಿನ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟು ಈಶ್ವರನ ಆಶೀರ್ವಾದ ಪಡೆದು ಅರಳಿ ಮರದ ಕೆಳಗೆ ಹುಣಸೂರಿನಲ್ಲಿ ಮೊದಲ ಸಭೆ ಮಾಡುತ್ತಿದ್ದೇನೆ.
ನಮ್ಮ ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಯಾವ ಗುಂಪು, ಯಾವ ವರ್ಗ, ಯಾವ ಜಾತಿ ಅನ್ನೋದೆಲ್ಲ ಇಲ್ಲ. ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ, ನಾನು ಜೈಲಲ್ಲಿ ಕೂತುಕೊಂಡು ಮಂಜುನಾಥ್ ಗೆ ಟಿಕೆಟ್ ನೀಡಬೇಕು ಅಂತಾ ಹೇಳಿ ಬರೆದು ಕಳುಹಿಸಿದ್ದೆ. ಇದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.
ಮಂಜುನಾಥ್ ಪಕ್ಷದ ಒಬ್ಬ ಪ್ರಯಾಣಿಕ ಕಾರ್ಯಕರ್ತ. ಈ ಚುನಾವಣೆ ಯಾಕೆ ಬಂದಿದೆ ಅಂತಾ ನಿಮಗೆ ಗೊತ್ತಿದೆ. 1978ರಲ್ಲಿ ಶಾಸಕರಾದ ವಿಶ್ವನಾಥ್ ಅವರು ಈ ರೀತಿ ಪಾಪ ನಿಮ್ಮನ್ನೆಲ್ಲಾ ಮಾರಿಕೊಂಡು ವ್ಯಾಪಾರ ಮಾಡುತ್ತಾರೆ ಅಂತಾ ತಿಳಿದುಕೊಂಡಿರಲಿಲ್ಲ.
ಕುಮಾರಸ್ವಾಮಿ ಮತ್ತು ನಮ್ಮ ಸರ್ಕಾರ ತೆಗೆಯಲು ಕಾರಣ ವಿಶ್ವನಾಥ್. ಈಗೇನೋ ಸಿದ್ದರಾಮಯ್ಯನವರ ಬಗ್ಗೆ ಬಣ್ಣ ಬಣ್ಣದ ಮಾತುಗಳನ್ನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಕೆಡವಲು ಏನು ಬೇಕೋ ಅದನ್ನು ವಿಶ್ವನಾಥ್ ಮಾಡಿದ್ದರು. ಈಗ ಕುಮಾರಸ್ವಾಮಿ ಸರ್ಕಾರ ಬೀಳಿಸಲು ಏನುಬೇಕೋ ಅದನ್ನು ಮಾಡಿದ್ದಾರೆ. ಎರಡು ಕೆಲಸ ಮಾಡಿ ಆಯಿತು. ಇವತ್ತು 15 ಶಾಸಕರನ್ನು ಜನರು ತಿರಸ್ಕಾರ ಮಾಡಬೇಕು. ಇಲ್ಲಿ ಮಂಜುನಾಥ್ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ಏನೇ ಸಣ್ಣಪುಟ್ಟ ತಪ್ಪು ಮಾಡಿದ್ದರು ಕೂಡ, ಬಿಜೆಪಿ ಅವರು ಇಲ್ಲಸಲ್ಲದ ಆರೋಪ ಮಾಡಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ನೀವು ತಲೆ ಕೆಡಿಸಿಕೊಳ್ಳಬೇಡಿ.
ಯಾರು ಎಷ್ಟೇ ದುಡ್ಡು ಕೊಟ್ಟರು ಸುಮ್ಮನೆ ತೆಗೆದುಕೊಳ್ಳುವುದನ್ನು ಕಲಿಯಿರಿ. ಯಾರಿಗೂ ಬೇಡ ಅಂತಾ ಹೇಳಕ್ಕೆ ಹೋಗಬೇಡಿ. ನನಗೆ, ಕಾಂಗ್ರೆಸ್ ಪಕ್ಷಕ್ಕೆ, ಅದರ ಎಲ್ಲ ನಾಯಕರು ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ತರುವಂತೆ ನೀವು ಮತ ಹಾಕಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ನೀವು ಹಸ್ತದ ಗುರುತಿಗೆ ಆಶೀರ್ವಾದ ಮಾಡಬೇಕು.
ರಾಜಕೀಯದಿಂದ ನಿವೃತ್ತಿಯಾಗಿ ಮನೆಯಲ್ಲಿ ಕೂರಬೇಕಾದವರನ್ನು ಪಾಪ ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮ ಪಕ್ಷದಿಂದ ಟಿಕೆಟ್ ಕೊಟ್ಟು ಗೆಲ್ಲಿಸಿ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು. ಇಂತಹವರಿಗೆ ದ್ರೋಹ ಮಾಡಿದವರನ್ನು ಮತ್ತೆ ನೀವು ಮತ ಹಾಕಿ ಗೆಲ್ಲಿಸುತ್ತೀರಾ?
ಹುಣಸೂರಿನ ಮಹಾ ಜನತೆ ಮುಖ್ಯಮಂತ್ರಿಗಳನ್ನು ತಯಾರು ಮಾಡಿ ರಾಜ್ಯಕ್ಕೆ ದೇಶಕ್ಕೆ ಗೌರವ ತಂದುಕೊಟ್ಟಿರುವ ಜನ. ಅಂತಹ ಇತಿಹಾಸ ಕೊಟ್ಟಂತ ಜನ ಈಗ ಇವರಿಗೆ ಉತ್ತರ ಕೊಡಬೇಕು. ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಆಶೀರ್ವಾದ ಇದ್ದರೆ ಮಂಜುನಾಥ್ ಗೆಲ್ಲುವುದು ಸತ್ಯ.