ನಾನು ದುರ್ಯೋಧನ, ದುಶ್ಯಾಸನ ಅಲ್ಲ : ವಿಶ್ವನಾಥ್ಗೆ ಸಾ.ರಾ.ಮಹೇಶ್ ತಿರುಗೇಟು
ನಾನು ದುರ್ಯೋಧನ ಅಂತ ಒಪ್ಪಿಕೊಳ್ಳುತ್ತೇನೆ. ದುಶ್ಯಾಸನ ಅಲ್ವಲ್ಲ ?ಎಂದು ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ಗೆ ಮಾಜಿ ಸಚಿವ ಸಾ.ರಾ.ಮಹೇಶ್ ತಿರುಗೇಟು ಕೊಟ್ಟಿದ್ದಾರೆ.
ನನ್ನನ್ನು ದುರ್ಯೋಧನ ಅಂತ ಕರೆದಿದ್ದಾರೆ. ಹೌದು ದುರ್ಯೋಧನನಿಗೂ ಒಂದಷ್ಟು ಒಳ್ಳೆಯ ಗುಣಗಳಿವೆ. ಪುಣ್ಯಕ್ಕೆ ದುಶ್ಯಾಸನ ಅಂತ ಕರೆದಿಲ್ಲ. ಯಾರು ಭೀಮ, ಯಾರು ದುರ್ಯೋಧನ ಅಂತ ಜನ ತೀರ್ಮಾನ ಮಾಡ್ತಾರೆ. ನಾವಿಬ್ಬರೂ ಆಣೆ ಪ್ರಯಾಣಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೇ ತಪ್ಪು. ನಾನು ದೇವಸ್ಥಾನ ಒಳಗೆ ಕುಳಿತಿದ್ದು ನಿಜ. ಒಂದು ವೇಳೆ ಹೊರಗಡೆ ಬಂದಿದ್ರೆ ನನ್ನ ಜತೆ ನೂರಾರು ಜನ ಕಾರ್ಯಕರ್ತರು ಇದ್ದರು. ಒಂದು ಚೂರು ಹೆಚ್ಚು ಕಡಿಮೆ ಆಗಿದ್ರೆ ಏನ್ ಮಾಡಬೇಕಿತ್ತು ?
ಜನ ಯಾರು ಪ್ರಾಮಾಣಿಕರು, ಅಪ್ರಮಾಣಿಕರು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಅನರ್ಹರನ್ನೇ ಪ್ರಮಾಣಿಕರು ಅಂದರೆ ಏನ್ ಹೇಳೋದು.? ಶಾಸಕ ಬದುಕಿದ್ದಾಗಲೇ ಉಪ ಚುನಾವಣೆ ನಡಿಯುತ್ತಿರುವುದು ಮೈಸೂರು ಜಿಲ್ಲೆ ಇತಿಹಾಸದಲ್ಲೇ ಮೊದಲು.
ಜನ ಎಲ್ಲವನ್ನೂ ಗಮನಿಸಿದ್ದಾರೆ. ಅವರೇ ಎಲ್ಲದಕ್ಕೂ ಉತ್ತರ ನೀಡ್ತಾರೆ.ಸರ್ಕಾರ ಬೀಳಿಸಲು ಮುಂಬೈಗೆ ಹೋಗಿ ಕುಳಿತಿದ್ರು. ಪ್ರವಾಹ ಬಂದಾಗ ರೆಸಾರ್ಟ್ ಸೇರಿಕೊಂಡರು. ಜನರ ಕಷ್ಟ ಇವರಿಗೆ ಬೇಕಿಲ್ಲ. ಈಗ ಮಂತ್ರಿ ಮಾಡುವುದೇ ನಮ್ಮ ಗುರಿ ಅಂತೀರಿ. ಜನರ ಕಷ್ಟ ಕೇಳೋದು ನಿಮ್ಮ ಗುರಿ ಅಲ್ವ? ಸಿಎಂ ಯಡಿಯೂರಪ್ಪಗೆ ಸಾ.ರಾ.ಮಹೇಶ್ ಪ್ರಶ್ನೆ ಹಾಕಿದ್ದಾರೆ.
ಇವಿಎಂ ಮೇಲೆ ಅನುಮಾನ :-
15ಕ್ಕೆ 15 ಸ್ಥಾನ ಗೆಲ್ಲುತ್ತೇವೆ ಎಂಬ ಬಿಜೆಪಿ ನಾಯಕರ ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಇವಿಎಂ ಮೇಲೆ ಅನುಮಾನ ಶುರುವಾಗುತ್ತಿದೆ. ಇವಿಎಂ ಬಗ್ಗೆ ಹಲವು ನಾಯಕರು ಹಿಂದೆ ಹಲವು ಹೇಳಿಕೆ ನೀಡಿದ್ದಾರೆ. ಆದರೆ ಈಗ ನನಗೂ ಸಣ್ಣದಾಗಿ ಅನುಮಾನ ಶುರುವಾಗಿದೆ. ಇವಿಎಂ ಬಗ್ಗೆ ಪರಿಶೀಲನೆ ಮಾಡಬೇಕು ಎಂದರು.
ಜಿ.ಟಿ.ದೇವೇಗೌಡ ನಮ್ಮ ನಾಯಕರು. ಅವರು ನಮ್ಮ ಜತೆಯಲ್ಲೇ ಇದ್ದಾರೆ. ಈಗಾಗಲೇ ಅವರು ನಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ದೂರವಾಣಿ ಮೂಲಕ ಜೆಡಿಎಸ್ ಪಕ್ಷದ ಪರ ಕೆಲಸ ಮಾಡುವಂತೆ ಹೇಳಿದ್ದಾರೆ ಎಂದರು.